ಪ್ರತಿನಿಧಿ ವರದಿ ತಿ.ನರಸೀಪುರ
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಮಾ. 26ರಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರಿನ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.
ಪಟ್ಟಣದ ಸೆಸ್ಕ್ ಕಚೇರಿಯ ಮುಂದೆ ಸಂಘದ ಹಲವು ಪದಾಧಿಕಾರಿಗಳು ಜಮಾವಣೆಗೊಂಡು ಕೃಷಿ ಪಂಪ್ ಸೆಟ್ ಗೆ ಸಮರ್ಪಕ ವಿದ್ಯುತ್ ಪೂರೈಕೆ, ಅಕ್ರಮ ಸಕ್ರಮ ಕಾನೂನು ಮರು ಜಾರಿಗೆ ಒತ್ತಾಯಿಸಿ ಧರಣಿ ನಡೆಸಿದರು. ಕೃಷಿ ಪಂಪ್ ಸೆಟ್ ಗಳಿಗೆ ನಿರಂತರ 10 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಮಾ. 26ರಂದು ಮೈಸೂರಿನ ಸೆಸ್ಕ್ ವಿಭಾಗೀಯ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಪದಾಧಿಕಾರಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ತಂದು ರೈತ ವಿರೋಧಿಯಾದರೆ, ರಾಜ್ಯ ಸರ್ಕಾರ ರೈತರು ಬೆಳೆದ ಭತ್ತ, ರಾಗಿಯನ್ನು ಬೆಂಬಲ ಬೆಲೆಯಡಿ ಖರೀದಿಸಿ ಪಡಿತರವಾಗಿ ರಾಜ್ಯದ ಜನತೆಗೆ ನೀಡದೆ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಿಂದ ಅಕ್ಕಿ ಖರೀದಿಗೆ ಮುಂದಾಗುವ ಮೂಲಕ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ಅಡಮಾನ ಇಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಜನತೆ ಬರದಿಂದ ಸಂಪೂರ್ಣ ತತ್ತರಿಸುತ್ತಿದ್ದು, ರೈತರು, ಜನ ಜಾನುವಾರುಗಳು ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಪಂಪ್ ಸೆಟ್ ನೀರು ನಂಬಿ ರೈತರು ಬೆಳೆ ಬೆಳೆದಿದ್ದು, ಸಕಾಲದಲ್ಲಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜು ಮಾಡದ ಪರಿಣಾಮ ಬೆಳೆಗಳು ಒಣಗುತ್ತಿವೆ. ರಾಜ್ಯ ಸರ್ಕಾರ ದಿನದಲ್ಲಿ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು. ಸೌರ, ಪವನ, ಜಲ ಇನ್ನಿತರ ಯಾವುದೇ ಮೂಲಗಳಿಂದ ವಿದ್ಯುತ್ ಉತ್ಪಾದನೆ ಮಾಡುವ ಅವಕಾಶವಿದ್ದು, ಯಾವುದೇ ಮೂಲದಿಂದಾದರೂ ವಿದ್ಯುತ್ ಉತ್ಪಾದಿಸಿ ಕೃಷಿಗೆ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಬನ್ನಹಳ್ಳಿಹುಂಡಿ ಶಿವಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ನಮ್ಮ ರೈತರ ಹಿತವನ್ನು ಕಾಯದೆ ತಮಿಳುನಾಡಿಗೆ ನೀರು ಹರಿಸುತ್ತಿದೆ. ರೈತರ ಪಂಪ್ ಸೆಟ್ ಗಳಿಗೆ ಕೇವಲ 2-3ಗಂಟೆಗಳು ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಇದರಿಂದ ರೈತರು ಬೆಳೆಗಳಿಗೆ ನಿರುಣಿಸಲು ಹರಸಾಹಸ ಪಡಬೇಕಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಹಾಡ್ಯ ರವಿ, ತಾಲೂಕು ಅಧ್ಯಕ್ಷ ಸುಜ್ಜಲೂರು ಜಯಸ್ವಾಮಿ, ಕೆರೆಹುಂಡಿ ರಾಜಣ್ಣ, ಅಂಬಳೆ ಮಹದೇವಸ್ವಾಮಿ, ಮಲೆಯೂರು ಮಹೇಂದ್ರ, ಕೊಂತಯ್ಯನಹುಂಡಿ ಮಹೇಶ್, ವಡ್ಡರಹುಂಡಿ ಮಹದೇವಸ್ವಾಮಿ, ಜಯಶಂಕರ ಕೀಳಲಿಪುರ, ಶ್ರೀಕಂಠ, ರೂಪೇಶ್, ಉಮೇಶ್, ಅರುಣ್, ಪವನ್, ರಾಜು ಇತರರು ಭಾಗವಹಿಸಿದ್ದರು.