ಪ್ರತಿನಿಧಿ ವರದಿ ಹಾಸನ
ರಸ್ತೆಯಲ್ಲಿ ಓಡಾಡುವವರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿ ಹೆದರಿಸಿ, ಅವರಿಂದ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಳ್ಳಲು ಹೊಂಚು ಹಾಕುತ್ತಿದ್ದ ಒಬ್ಬ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಮತ್ತೆ ನಾಲ್ವರು ಪರಾರಿಯಾಗಿದ್ದಾರೆ.
ಆ.6 ರಂದು ರಾತ್ರಿ 11 ಗಂಟೆ ಸಮಯದಲ್ಲಿ ಪೆನ್ಶೆನ್ ಮೊಹಲ್ಲಾ ಠಾಣೆ ಪಿಎಸ್ಐ ಲೋಹಿತ್ ಅವರು, ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಠಾಣಾ ಸರಹದ್ದಿನ ನಯರಾ ಪೆಟ್ರೋಲ್ ಬಂಕ್ ಹತ್ತಿರದ 80 ಫೀಟ್ ರಸ್ತೆ ಬದಿಯಲ್ಲಿ 4-5 ಜನರು ಕೈಗಳಲ್ಲಿ ಮಚ್ಚು ಮತ್ತು ಕಬ್ಬಿಣದ ರಾಡು ಹಿಡಿದು ಹೊಂಚು ಹಾಕಿದ್ದರು. ಅದರ ಉದ್ದೇಶ ರಸ್ತೆಯಲ್ಲಿ ಓಡಾಡುವ ಜನರನ್ನು ಅಡ್ಡಗಟ್ಟಿ ಅವರಿಂದ ಹಣ ಮತ್ತು ಆಭರಣ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಳ್ಳಲು ಸಂಚು ನಡೆಸಿದ್ದರು.
ರಸ್ತೆಯಲ್ಲಿ ಓಡಾಡುತ್ತಿದ್ದವರನ್ನು ಕಂಡ ಕೂಡಲೇ ಸಿಬ್ಬಂದಿಗಳ ಸಹಾಯದಿಂದ ಪಿಎಸ್ಐ ಏಕಾಏಕಿ ದಾಳಿ ಮಾಡಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿಕೊಂಡಿದ್ದ ದಾಸರಕೊಪ್ಪಲಿನ ಅಭಿಲಾಷ(19) ಎಂಬಾತನನ್ನು ಬಂಧಿಸಿದ್ದಾರೆ. ಆತನ ಬಳಿ ಇದ್ದ ಮಚ್ಚು ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಆತನೊಂದಿಗಿದ್ದ ನಾಲ್ವರು ಕತ್ತಲಾಗಿದ್ದರಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.