ಸಾಗರ್, ಸೆಪ್ಟೆಂಬರ್ 14: ಪ್ರತಿಪಕ್ಷಗಳ ಮೈತ್ರಿ ಕೂಟ ‘ಇಂಡಿಯಾ’ವು ಸನಾತನ ಧರ್ಮವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪತ್ರಿಪಕ್ಷಗಳ ಒಕ್ಕೂಟವು ಸನಾತನ ಧರ್ಮ, ದೇಶದ ಮೂಲ ಸಂಸ್ಕೃತಿ ಹಾಗೂ ನಾಗರಿಕರಿಗೆ ಅಪಾಯವನ್ನು ತಂದೊಡ್ಡುತ್ತಿದೆ ಎಂದು ಆರೋಪಿಸಿದ್ದಾರೆ. ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಹಾಗೂ ಕೊರೊನಾಗೆ ಹೋಲಿಕೆ ಮಾಡಿದ್ದರು.
ಹೇಗೆ ಈ ರೋಗಗಳ ವಿರುದ್ಧ ಹೋರಾಡಿದರೆ ಯಾವುದೇ ಪ್ರಯೋಜನವಿಲ್ಲವೋ, ಅದನ್ನು ಬುಡದಿಂದಲೇ ನಿರ್ಮೂಲನೆ ಮಾಡುವ ಅಗತ್ಯವಿದೆಯೋ ಹಾಗೆಯೇ ಸನಾತನ ಧರ್ಮವನ್ನು ಕೂಡ ನಿರ್ಮೂಲನೆ ಮಾಬೇಕು ಎಂಬ ಹೇಳಿಕೆ ವಿವಾದವನ್ನು ಹುಟ್ಟುಹಾಕಿದೆ.
ಈ ಹೇಳಿಕೆಗೆ ಸರಿಯಾದ ಪ್ರತಿಕ್ರಿಯೆ ನೀಡುವಂತೆ ಪ್ರಧಾನಿ ಮೋದಿ ತನ್ನ ಸಚಿವರಿಗೆ ಒತ್ತಾಯಿಸಿದ್ದಾರೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ‘ಘಮಂಡಿಯಾ’ ಮೈತ್ರಿಯು ಸನಾತನ ಧರ್ಮವನ್ನು ನಾಶಮಾಡಲು ಬಯಸುತ್ತಿದೆ ಎಂದು ಹೇಳಿದರು.