ಹನೂರು: ಪಟ್ಟಣದ ಪ್ರಮುಖ ಮುಖ್ಯ ರಸ್ತೆ ಹಾಗೂ ಬಡಾವಣೆಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದೆ ಇರುವುನ್ನು ಖಂಡಿಸಿ ಪಟ್ಟಣದ ನಿವಾಸಿಗಳು ಕಸವನ್ನು ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ಸುರಿದು ಆಕ್ರೋಶ ಹೊರಹಾಕಿದ ಘಟನೆ ಶನಿವಾರ ಜರುಗಿತು.
ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆ, ಕನ್ಯಕಾ ಪರಮೇಶ್ವರಿ ರಸ್ತೆ, ಬೆಟ್ಟಳ್ಳಿ ಮಾರಮ್ಮ ದೇವಾಲಯ ರಸ್ತೆ, ದೊಡ್ಡಿಕೇರಿ ಬೀದಿಗಳಲ್ಲಿ ಕಳೆದ ಒಂದು ವಾರದಿಂದ ಕಸ ವಿಲೇವಾರಿ ಮಾಡದೆ ಇರುವುದರಿಂದ ಕಸ ಕೊಳೆತು ಗಬುನಾರುತಿದೆ ಎಂದು ಎಂಟನೇ ವಾರ್ಡಿನ ನಿವಾಸಿಗಳು ಸ್ಥಳೀಯ ಸದಸ್ಯರು ಹಾಗೂ ಉಪಾಧ್ಯಕ್ಷ ಆನಂದ್ ರವರಿಗೂ ಕಸ ವಿಲೇವಾರಿ ಮಾಡಿಸುವಂತೆ ಮನವಿ ಮಾಡಿದ್ದಾರೆ. ಅವರು ಸಹ ನಿವಾಸಿಗಳ ಮನವಿಗೆ ಸ್ಥಳದಲ್ಲಿಯೇ ಮುಖ್ಯಾಧಿಕಾರಿ ಅಶೋಕ್ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಮೂರು ದಿನವಾದರೂ ಕಸ ವಿಲೇವಾರಿ ಮಾಡದೆ ಇರುವುದರಿಂದ ಬೇಸತ್ತ ದೊಡ್ಡಿಕೇರಿ ಬೀದಿ ನಿವಾಸಿಗಳು ಪಟ್ಟಣ ಪಂಚಾಯತಿ ಮುಂಭಾಗ ಕಸ ಸುರಿದು ಆಕ್ರೋಶ ಹೊರ ಹಾಕಿದರು.
ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ಪಟ್ಟಣದ ನಿವಾಸಿಗಳು ಕಸ ಸುರಿದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ವಿಚಾರ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಮುಖ್ಯಾಧಿಕಾರಿ ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಪೌರಕಾರ್ಮಿಕರನ್ನು ಮನವೊಲಿಸಿ ಕಸ ವಿಲೇವಾರಿ ಮಾಡಿಸುವಂತೆ ತಿಳಿಸಿದ್ದಾರೆ. ಸದಸ್ಯರು ಪೌರಕಾರ್ಮಿಕರ ಮನವೊಲಿಸಿ ಕಸ ಸುರಿದ ಒಂದು ಗಂಟೆಯಲ್ಲಿ ಬಂಡಳ್ಳಿ ಮುಖ್ಯ ರಸ್ತೆಯಲ್ಲಿ ಮಾತ್ರ ಕಸ ವಿಲೇವಾರಿ ಮಾಡಿಸಿದ್ದಾರೆ.
ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 13 ವಾರ್ಡ್ ಗಳಲ್ಲಿ ಪ್ರತಿನಿತ್ಯ ಕಸ ವಿಲೇವಾರಿ ಮಾಡಲು ಒಂದು ಟ್ರಾಕ್ಟರ್ ಮೂರು ಟಿಪ್ಪರ್ ಗಳಿದೆ. ಈಗಾಗಲೇ ಒಂದು ಟಿಪ್ಪರ್ ದುರಸ್ತಿ ಗೆಬಿಟ್ಟು ವರ್ಷ ಕಳೆದರೂ ಇನ್ನೂ ದುರಸ್ತಿ ಮಾಡಿಸದೆ ಇರುವುದರಿಂದ ಗುಜರಿಗೆ ಹಾಕುವಂತಹ ಸನ್ನಿವೇಶ ಬಂದಿದೆ. ಇರುವಂತಹ ಎರಡು ಟಿಪ್ಪರ್ ಗಳನ್ನು ಸಹ ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದರಿಂದ ಹೆಚ್ಚು ಕಸ ತುಂಬಲು ಸಾಧ್ಯವಾಗುತ್ತಿಲ್ಲ ಎಂದು ಹೆಸರನ್ನೇಳದ ಚಾಲಕರೊಬ್ಬರು ಅಳಲನ್ನು ತೋಡಿಕೊಂಡಿದ್ದಾರೆ.
ಚಿತ್ರ : ಹನೂರು ಪಟ್ಟಣ ಪಂಚಾಯತ್ ಕಚೇರಿ ಮುಂದೆ ಕಸ ಹಾಕಿರುವುದು.
ಚಿತ್ರ : ಹನೂರು ಪಟ್ಟಣದಲ್ಲಿ ಕಸ ವಿಲೇವಾರಿಯಾಗದೆ ಬಿದ್ದಿರುವುದು.