ಬೇಲೂರು: ತಾಲೂಕಿನ ಮತ್ತಾವರದಲ್ಲಿ ಗುರುವಾರ ಸಂಜೆ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆಗೆ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಾವರ ಗ್ರಾಮದ ವಸಂತ (43) ಮೃತಪಟ್ಟ ವ್ಯಕ್ತಿ. ಸಂಜೆಯ ವೇಳೆ ತೋಟದ ಮನೆಯಲ್ಲಿದ್ದ ವಸಂತ ಅವರ ಮೇಲೆ ಒಂಟಿ ಆನೆಯೊಂದು ಏಕಾಏಕಿ ದಾಳಿ ಮಾಡಿದೆ. ಸೊಂಡಿಲಿನಿಂದ ತಳ್ಳಿ, ತುಳಿದಿದೆ. ಇದರಿಂದ ವಸಂತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಜೊತೆಗೆ ಇದ್ದ ಪ್ರತ್ಯಕ್ಷದರ್ಶಿ ಕಾರ್ಮಿಕ ತಿಳಿಸಿದ್ದಾರೆ. ಬಿಕ್ಕೋಡು ಭಾಗದಲ್ಲಿ ಕಾಡಾನೆಗಳು ಹಿಂಡಾಗಿ ಓಡಾಡುತ್ತಿದ್ದು, ಅದರಲ್ಲಿನ ಒಂದು ಆನೆ ಮತ್ತಾವರದ ಬಳಿ ಬಂದು ದಾಳಿ ಮಾಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಆನೆ ದಾಳಿಗೆ ನಿರಂತರವಾಗಿ ಸಾವುಗಳು ಸಂಭವಿಸುತ್ತಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆನೆಗಳನ್ನು ಸ್ಥಳಾಂತರ ಮಾಡದೇ ಇದ್ದರೆ, ತಮ್ಮನ್ನೆಲ್ಲ ಜೆಸಿಬಿ ಮೂಲಕ ಗುಂಡಿ ತೋಡಿ ಮುಚ್ಚಿಬಿಡಿ ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಚೇತನ್ ಕುಮಾರ್ ಮತ್ತು ಗ್ರಾಮಸ್ಥರು ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಬಾರಿ ಆನೆ ದಾಳಿಯಾದಾಗಲೂ ಅಧಿಕಾರಿಗಳು ಗ್ರಾಮಸ್ಥರ ಮೂಗಿಗೆ ತುಪ್ಪ ಸವರುತ್ತಾರೆ. ಬೆಳಿಗ್ಗೆಯಿಂದ ರಸ್ತೆ ತಡೆ ನಡೆಸುತ್ತ ಧಿಕ್ಕಾರ ಕೂಗಿ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಇಲಾಖೆ ಸಚಿವರು ಸ್ಥಳಕ್ಕೆ ಆಗಮಿಸುವವರಿಗೂ ರಸ್ತೆ ತಡೆ ಮುಂದುವರಿಸುತ್ತೇವೆ. ಮೃತ ದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಮಧ್ಯಾಹ್ನದ ವೇಳೆಗೆ ಪ್ರತಿಭಟನಾರರನ್ನು ಮೋನವಲಿಸಿದ ಶಾಸಕ ಎಚ್.ಕೆ.ಸುರೇಶ್ ಹಾಗೂ ಜಿಲ್ಲಾಧಿಕಾರಿ ಸತ್ಯಭಾಮ ಮೃತ ಕುಟುಂಬಕ್ಕೆ 15 ಲಕ್ಷ ರು. ಚೆಕ್ ವಿತರಿಸಿ ಮಲೆನಾಡು ಭಾಗದ ಹೋಬಳಿಗಳ ಮಟ್ಟದಲ್ಲಿ ಸಮಿತಿ ರಚನೆ ಮಾಡಿ 15 ದಿನಗಳಿಗೊಮ್ಮೆ ಸಭೆ ಆಯೋಜಿಸಲಾಗುವುದು. ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಪ್ರಾರಂಭಿಸಲಾಗುವುದು. ಪ್ರತಿಭಟನೆ ಕೈಬಿಟ್ಟು ಅಂತ್ಯಸಂಸ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು