ವ್ಯಾಪಾರ, ವಹಿವಾಟಿಗೆ ತೊಂದರೆ । ತಿರುಗಿ ನೋಡದ ಅಧಿಕಾರಿಗಳು
ಮೂಲ ಸೌಕರ್ಯದ ಕೊರತೆ । ಸಂತೆ ಮೈದಾನದ ಅವ್ಯವಸ್ಥೆ
ರಘುವೀರ್ ಪಾಂಡವಪುರ
ಸ್ವಾತಂತ್ರ್ಯ ಪೂರ್ವದಿಂದಲೂ ನಡೆಯುತ್ತಿರುವ ಪ್ರಸಿದ್ಧ ಪಾಂಡವಪುರ ಸಂತೆ ಮೈದಾನ ಕೆಸರು ಗದ್ದೆಯಂತಾಗಿ ತ್ಯಾಜ್ಯ, ದುರ್ವಾಸನೆ, ಪಾರ್ಕಿಂಗ್ ಸಮಸ್ಯೆ ಹಾಗೂ ಮೂಲ ಸೌಕರ್ಯದ ಕೊರತೆಯಿಂದ ವ್ಯಾಪಾರ, ವಹಿವಾಟು ನಡೆಸಲು ಕಷ್ಟದ ಪರಿಸ್ಥಿತಿ ಉಂಟಾಗಿದೆ.
ಪುರಸಭೆ ಮುಂಭಾಗದಲ್ಲಿರುವ ಸಂತೆಮೈದಾನ ವಿಸ್ತೀರ್ಣ ದೊಡ್ಡಿಬೀದಿ, ಪೊಲೀಸ್ ಠಾಣೆ ರಸ್ತೆ, ಮಟನ್ ಮಾರ್ಕೆಂಟ್ ರಸ್ತೆಗೆ ಸಂಪರ್ಕ ಹೊಂದಿಕೊಂಡಂತೆ ಸುಮಾರು ನಾಲ್ಕೂವರೆ ಎಕರೆ ಪ್ರದೇಶದ ವಿಶಾಲ ಜಾಗದಲ್ಲಿ ವಾರದ ಪ್ರತಿ ಗುರುವಾರದಂದು ದೊಡ್ಡ ಸಂತೆ ನಡೆಯುತ್ತದೆ.
ಗುರುವಾರದ ಸಂತೆಗೆ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ನಾಗಮಂಗಲ, ಕೆ.ಆರ್.ನಗರ ತಾಲೂಕು ಸೇರಿದಂತೆ ಮಂಡ್ಯ ಜಿಲ್ಲೆಯಿಂದ ತರಕಾರಿ, ಸೊಪ್ಪು, ತೆಂಗಿನಕಾಯಿ, ಬೆಲ್ಲ ಸೇರಿದಂತೆ ಇತರೆ ಪದಾರ್ಥಗಳನ್ನು ರೈತರು ವ್ಯಾಪಾರಕ್ಕೆಂದು ತರುತ್ತಾರೆ.
ಬೆಳಗ್ಗಿನ ಜಾವ 3 ಗಂಟೆಯಿಂದ ರಾತ್ರಿ 9 ಗಂಟೆ ತನಕ ಸಂತೆಯಲ್ಲಿ ವ್ಯಾಪಾರ, ವಹಿವಾಟು ನಡೆಯುತ್ತದೆ. ಸಂತೆಯಲ್ಲಿ ಪದಾರ್ಥ ಖರೀದಿಸಲು ತಾಲೂಕಿನಾದ್ಯಂತ ಮಹಿಳೆಯರು, ರೈತರು ಒಳಗೊಂಡಂತೆ ಸಾವಿರಾರು ಮಂದಿ ಜನರು ಬಂದು ಹೋಗುತ್ತಾರೆ.
ಪುರಸಭೆ ಆಡಳಿತದಿಂದ ಟೆಂಡರ್ ನೀಡಿ, ಖಾಸಗಿ ವ್ಯಕ್ತಿ ಮೂಲಕ ಸುಂಕಾ ವಸೂಲಿ ಮಾಡಲಾಗುತ್ತಿದೆ. ತರಕಾರಿ, ಸೊಪ್ಪು, ಇತರೆ ಸಾಮಾಗ್ರಿಗಳಿಗೆ 10, 15, 20ರೂ. ಮತ್ತು ಫುಟ್ ಪಾತ್ ವ್ಯಾಪಾರಸ್ಥರಿಗೆ 40, 50 ರೂ.ಗಳಷ್ಟು ಸಂತೆಯಲ್ಲಿ ಸುಂಕಾ ವಸೂಲಾತಿ ಮಾಡಲಾಗುತ್ತಿದೆ. ಸುಂಕಾ ಪಾವತಿಸಿದ ರೈತರು ಮತ್ತು ವ್ಯಾಪಾರಸ್ಥರಿಗೆ ಸೌಕರ್ಯ ಇಲ್ಲದೆ ಪರದಾಡುತ್ತಿದ್ದಾರೆ.
ವಿಪರೀತ ಮಳೆಯಿಂದಾಗಿ ಸಂತೆಮೈದಾನ ಸಂಪೂರ್ಣ ಕೆಸರು ತುಂಬಿಕೊಂಡು ತಿರುಗಾಡಲು ಹಾಗೂ ವ್ಯಾಪಾರ ಮಾಡಲು ಆಗುತ್ತಿಲ್ಲ. ಮಳೆ ಬಂದಾಗ ಸಂತೆಯಲ್ಲಿ ನೀರು ತುಂಬಿಕೊಂಡರೆ ಸಂತೆಯ ಸ್ಥಿತಿ ಹೇಳತೀರದು. ಇದು ಸಂತೆಯೋ ಅಥವಾ ಕೆಸರಿನ ಜಾಗವೋ ಎಂಬಂತೆ ದೃಶ್ಯ ಕಂಡು ಬರುತ್ತದೆ.
ಪುರಸಭೆ ಮುಂಭಾಗ ಸಂತೆಗೆ ತೆರಳಬೇಕಾದರೆ ತಿರುಗಾಡಲು ಆಗದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಸಂತೆ ಒಳಗೆ ಪ್ರವೇಶ ಮಾಡಿ ಸೊಪ್ಪು, ತರಕಾರಿ, ಪದಾರ್ಥ ಖರೀದಿಸುವಾಗ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಅನಿವಾರ್ಯತೆಯಿಂದ ಸಂತೆಯಲ್ಲಿ ವ್ಯಾಪಾರ ನಡೆಸಲಾಗುತ್ತಿದೆ.
ಕೆರೆಯಾಗಿ ಮಾರ್ಪಾಡಾಗುವ ಸಂತೆ ಮೈದಾನ: ಮಳೆ ಬಂದಾಗ ವಿಜಯ ಕಾಲೇಜು ಮುಂಭಾಗದ ರಸ್ತೆಯಿಂದ, ಪೇಟೆಬೀದಿ ಹಾಗೂ ಸಂತೆ ಬೀದಿ ಮೂಲಕ ಸಂತೆ ಮೈದಾನಕ್ಕೆ ನೀರು ಹರಿಯುತ್ತದೆ. ಅದೇ ಸಂದರ್ಭದಲ್ಲಿ ಸಂತೆ ತುಂಬಾ ನೀರು ತುಂಬಿಕೊಂಡು ಕೆರೆಯಾಗಿ ಮಾರ್ಪಾಡಾಗುತ್ತದೆ. ಸಂತೆಮೈದಾನದ ನೀರು ದೊಡ್ಡಿಬೀದಿ, ಗಾಣಿಗರ ಬೀದಿಗೆ ನುಗ್ಗಿದ ಪರಿಣಾಮ ನಿವಾಸದ ಮನೆಯೊಳಗೆ ನೀರು ಹರಿಯುತ್ತಿದೆ. ಇಷ್ಟೆಲ್ಲಾ ಸಮಸ್ಯೆ ಸಂತೆ ಮೈದಾನದ ಅವ್ಯವಸ್ಥೆಯಿಂದ ಕೂಡಿದೆ.
ಶಾಸಕರು ಗಮನಹರಿಸಲಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆಯಲ್ಲಿ ಪುರಸಭೆ ಸದಸ್ಯರು ಸಭೆ ನಡೆಸಿ, ಸಂತೆ ಮೈದಾನ ಅಭಿವೃದ್ಧಿಗೆ ಬಗ್ಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಶಾಸಕರು ಸಂತೆ ಮೈದಾನ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಸಂತೆ ಮೈದಾನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ ಎಂದು ಶಾಸಕರು ಭರವಸೆ ನೀಡಿದ್ದರು.
ಪುಟ್ಟಣ್ಣಯ್ಯ ಮನಸ್ಸು ಮಾಡಿದ್ದರು: ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾಗಿದ್ದಾಗ ಸಂತೆ ಮೈದಾನವನ್ನು ಸೂಪರ್ ಮಾರ್ಕೆಟ್ ಮಾದರಿಯಲ್ಲಿ ಮೂಲ ಸೌಕರ್ಯ ಕಲ್ಪಿಸಲು 1 ಕೋಟಿ ರೂ. ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ ಆಗಿದ್ದ ಸರ್ಕಾರದಲ್ಲಿ ಸಂತೆ ಮೈದಾನ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಿಲ್ಲ.
ಚುನಾವಣೆ ಪ್ರಚಾರದಲ್ಲಿ ಭರವಸೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ, ಮುಖಂಡ ಸಮಾಜ ಸೇವಕ ಬಿ.ರೇವಣ್ಣ, ಕಾಂಗ್ರೆಸ್ ಮುಖಂಡ ಡಾ.ಎಚ್.ಎನ್.ರವೀಂದ್ರ ಸೇರಿದಂತೆ ರೈತಸಂಘ ಮುಖಂಡರ ಸಮ್ಮುಖದಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ ಅವರು ಮಾತನಾಡಿ, ಪಾಂಡವಪುರ, ಅರಳಕುಪ್ಪೆ ಸಂತೆಯಲ್ಲಿ ರೈತರು ಟಾರ್ಪಾಲ್ ಕಟ್ಟಿಕೊಂಡು ವ್ಯಾಪಾರ ಮಾಡುವುದನ್ನು ತಪ್ಪಿಸಿ, ವ್ಯವಸ್ಥಿತ ಕಟ್ಟಡ ನಿರ್ಮಿಸಿ, ಸಂತೆಗೆ ಹೊಸರೂಪ ಸಿಗಬೇಕಾದರೆ ಹಾಗೂ ರೈತರಿಗೆ ಸೌಕರ್ಯ ಕಲ್ಪಿಸಬೇಕಾದರೆ ದರ್ಶನ್ ಪುಟ್ಟಣ್ಣಯ್ಯ ಗೆಲ್ಲಿಸಿಕೊಡಿ ಎಂದು ಭರವಸೆ ಕೊಟ್ಟಿದ್ದರು. ಆದರೆ ಭರವಸೆ ನೀಡಿರುವ ಬಗ್ಗೆ ಚಿಕ್ಕಮರಳಿ ಬೋರೇಗೌಡರು ಶಾಸಕರಿಗೆ ಒತ್ತಾಯಿಸಬೇಕಿದೆ.
ವ್ಯಾಪಾರಸ್ಥರ ಒತ್ತಾಯ: ಸ್ವಾತಂತ್ರ್ಯ ಸಿಗುವ ಮುಂಚೆಯೇ, ಮೈಸೂರು ರಾಜರ ಆಳ್ವಿಕೆಯಲ್ಲಿದ್ದ ಪಾಂಡವಪುರ ಸಂತೆ ಸಾಕಷ್ಟು ಹೆಸರುವಾಸಿಯಾಗಿದೆ. ಸಾವಿರಾರು ಜನರು ಬಂದು ಹೋಗುವ ಸಂತೆಗೆ ಮೂಲಭೂತ ಸೌಕರ್ಯ ಕಲ್ಪಿಸಿ, ಸುಂದರ, ಸುಸಜ್ಜಿತ ಸಂತೆಯಾಗಿ ಪರಿವರ್ತನೆ ಮಾಡಬೇಕೆಂದು ಸಂತೆ ವ್ಯಾಪಾರಸ್ಥರಾದ ಭಾಗ್ಯಮ್ಮ, ಸರೋಜ, ಗೌತಮ್ ಒತ್ತಾಯಿಸಿದ್ದಾರೆ.
————-
ಜೋಪಾನ, ಜಾರುತ್ತೆ, ಬೀಳ್ತೀರಾ! ಪಾಂಡವಪುರದಲ್ಲಿ ಗುರುವಾರ ನಡೆಯುವ ಸಂತೆಗೆ ಸಾವಿರಾರು ಜನರು ಬಂದು ಹೋಗುತ್ತಾರೆ. ಆದರೆ ಸಂತೆಯಲ್ಲಿ ಸಾಕಷ್ಟು ಸಮಸ್ಯೆಯಿಂದಾಗಿ ತೊಂದರೆ ಉಂಟಾಗಿದೆ. ಸಂತೆಗೆ ನೀರು ತುಂಬಿಕೊಂಡರೆ ಜನರು ತಿರುಗಾಡಲು ಆಗುವುದಿಲ್ಲ. ಜಾರಿ ಬೀಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಪುರಸಭೆ ಆಡಳಿತ ಸುಂಕಾ ಚೆನ್ನಾಗಿ ವಸೂಲಿ ಮಾಡುತ್ತದೆ. ಆದರೆ ಮೂಲಭೂತ ಸೌಕರ್ಯ ಮಾತ್ರ ಇಲ್ಲವೇ ಇಲ್ಲ.
– ತ್ಯಾಗರಾಜು, ಪೆನ್ಷನ್ ಕಾಲೋನಿ ನಿವಾಸಿ, ಪಾಂಡವಪುರ
———–
ಸಂತೆಮೈದಾನ ಅಭಿವೃದ್ಧಿ ಬಗ್ಗೆ ಪುರಸಭೆಯಲ್ಲಿ ಸಭೆ ನಡೆದಾಗ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಪುರಸಭೆ ಸದಸ್ಯರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದೆ. ಶಾಸಕರು ಹಾಗೂ ಪುರಸಭೆ ಸದಸ್ಯರ ಸಹಕಾರದಿಂದ ಸಂತೆ ಸಮಸ್ಯೆ ಬಗೆಹರಿಸಿ, ಅಭಿವೃದ್ಧಿಪಡಿಸಲಾಗುವುದು.
– ವೀಣಾ, ಮುಖ್ಯಾಧಿಕಾರಿ, ಪುರಸಭೆ, ಪಾಂಡವಪುರ.
——————
ಪೋಟೋ: ಪಾಂಡವಪುರ ಸಂತೆಯ ಅವ್ಯವಸ್ಥೆ
ತ್ಯಾಗರಾಜ್, ನಿವಾಸಿ, ಪಾಂಡವಪುರ
ವೀಣಾ, ಮುಖ್ಯಾಧಿಕಾರಿ, ಪುರಸಭೆ, ಪಾಂಡವಪುರ