ತುರುವೇಕೆರೆ : ರಾಜಕೀಯ ಮಾಡುವ, ಶಾಲೆಗೆ ಸರಿಯಾಗಿ ಬಾರದ, ಮಕ್ಕಳಿಗೆ, ಶಿಕ್ಷಕರಿಗೆ ಅಶ್ಲೀಲವಾಗಿ ಮಾತನಾಡುವ ಶಿಕ್ಷಕ ನಮಗೆ ಬೇಡ ಎಂದು ತಾಲೂಕಿನ ಅಜ್ಜನಹಳ್ಳಿಯ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ಘಟನೆ ಸೋಮವಾರ ನಡೆಯಿತು.
ಈ ಶಾಲೆಯ ಸಮಾಜ ವಿಜ್ಞಾನ ವಿಷಯದ ಶಿಕ್ಷಕ ರವಿಕುಮಾರ್ ಎಂಬುವವರು ಶಾಲೆಗೆ ಸರಿಯಾಗಿ ಬರುತ್ತಿಲ್ಲ. ಬಂದ ವೇಳೆ ಗ್ರಾಮಸ್ಥರು, ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಗೈರು ಹಾಜರಿಯ ಬಗ್ಗೆ ಆಕ್ಷೇಪಿಸಿದರೆ ಅವರನ್ನು ಅಶ್ಲೀಲವಾಗಿ ನಿಂದಿಸುವುದಲ್ಲದೇ, ತಮಗೆ ಶಾಸಕರ ಬೆಂಬಲವಿದೆ. ನೀವೇನೂ ನನ್ನನ್ನು ಮಾಡಲು ಸಾಧ್ಯವಿಲ್ಲ. ನಾನು ಶಾಲೆಗೆ ಬರುವುದೇ ಹೀಗೆ. ಏನಾದರೂ ಮಾಡಿಕೊಳ್ಳಿ ಎಂದು ಉಡಾಫೆಯ ಮಾತುಗಳನ್ನು ಆಡುತ್ತಾರೆ ಎಂದು ಶಾಲೆಯ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಅಶ್ಲೀಲ ಸಂದೇಶ ಈ ಶಿಕ್ಷಕ ರವಿಕುಮಾರ್ ಶಾಲೆಯ ಕೆಲವು ಶಿಕ್ಷಕರಿಗೆ ಅಶ್ಲೀಲ ದೃಶ್ಯಗಳನ್ನು ಮತ್ತು ಸಂದೇಶಗಳನ್ನು ವ್ಯಾಟ್ಸಾಪ್ ಮೂಲಕ ರವಾನೆ ಮಾಡಿದ್ದಾರೆ. ಕೆಲವು ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ವಾರದಲ್ಲಿ ಮೂರು ದಿನಗಳ ಕಾಲ ಬರುವ ಈ ಶಿಕ್ಷಕ ರವಿಕುಮಾರ್, ಶಾಲೆಗೆ ಬಂದು ಕೆಲವೇ ಗಂಟೆಗಳ ಕಾಲ ಶಾಲೆಯಲ್ಲಿ ಇದ್ದು ವಾಪಸ್ಸಾಗುತ್ತಾರೆ. ವಿಚಾರಿಸಿದರೆ ನಾನು ಬರುವುದೇ ಹೀಗೆ, ನನಗೆ ಅಕ್ಷರ ದಾಸೋಹದ ಜವಾಬ್ದಾರಿ ಇದೆ. ನಾನು ಯಾರಿಗೇನೂ ಉತ್ತರ ಕೊಡಬೇಕಿಲ್ಲ. ನಾನು ಶಾಸಕರ ಕ್ಯಾಂಡಿಡೇಟ್. ನಾನೇ ಬಿಇಒ ಅವರನ್ನು ೬ ಲಕ್ಷ ರು. ಕೊಟ್ಟು ಹಾಕಿಸಿಕೊಂಡು ಬಂದಿದ್ದೇನೆ. ಅವರೂ ಸಹ ನನ್ನನ್ನು ಏನೂ ಮಾಡಲು ಆಗಲ್ಲ ಎಂದು ದರ್ಪದಿಂದ ಉತ್ತರ ಕೊಡುತ್ತಾರೆಂದು ಗ್ರಾಮದ ಹಿರಿಯ ಮುಖಂಡ ಕಪನಯ್ಯ ದೂರಿದರು.\
ಪ್ರತಿಭಟನೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಿವಣ್ಣ, ಸದಸ್ಯರಾದ ಲಕ್ಷ್ಮಮ್ಮ, ಕುಮಾರ್, ಮಂಜುಳಾದೇವಿ, ಸವಿತಾ, ಲೋಕೇಶ್, ಗ್ರಾಮ ಪಂಚಾಯ್ತಿ ಸದಸ್ಯ ಚೇತನ್, ಪೋಷಕರಾದ ಗಂಗಣ್ಣ, ವರದೇಗೌಡ, ಸಣ್ಣಯ್ಯ, ಅಶ್ವತ್ಥ ನಾರಾಯಣ್, ಪಾಪೇಗೌಡ, ಸದಾನಂದಗೌಡ, ಕಂಚೀವರದಯ್ಯ, ಮಹಾಲಿಂಗಯ್ಯ, ಶಿವಣ್ಣ, ಉಷಾ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು