ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಸೂಚನೆ
ಪ್ರತಿನಿಧಿ ವರದಿ ಚಿಕ್ಕಮಗಳೂರು
ಸಾರ್ವಜನಿಕರು ನಿಗದಿತ ಸಮಯಕ್ಕೆ ತೆರಿಗೆ ಪಾವತಿಸಿದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾನಾಗರಾಜ್ ತಿಳಿಸಿದರು.
ನಗರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ತೆರಿಗೆ ವಸೂಲಾತಿಗೆ ವೈರ್ ಲೆಸ್ ಥರ್ಮಲ್ ಪ್ರಿಂಟರ್ ಮತ್ತು ಫೋನ್ನ್ನು ನಗರಸಭೆ ಸಿಬ್ಬಂದಿಗೆ ವಿತರಿಸಿ ಅವರು ಮಾತನಾಡಿದರು. ಯಾವುದೇ ಒಂದು ವರ್ಗದಲ್ಲಿ ಆದಾಯದ ಕ್ರೋಢೀಕರಣ ಸಮರ್ಪಕವಾಗಿದ್ದರೆ, ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮತ್ತು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯ. ಸಾರ್ವಜನಿಕರು ನೀರು, ವಿದ್ಯುತ್, ಆಸ್ತಿ ತೆರಿಗೆ ಸೇರಿದಂತೆ ವಿವಿಧ ರೀತಿಯ ತೆರಿಗೆಗಳನ್ನು ನಿಗದಿತ ಸಮಯಕ್ಕೆ ಪಾವತಿಸಬೇಕು. ಆಧುನಿಕ ಯುಗದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಯಾವುದೇ ಕಾರ್ಯವನ್ನು ಶೀಘ್ರವಾಗಿ ಮಾಡಲು ಸಾಧ್ಯ. ವೈರ್ ಲೆಸ್ ಥರ್ಮಲ್ ಪ್ರಿಂಟರ್ ಮತ್ತು ಫೋನ್ ಆಪ್ ನಿಂದ ಸಾರ್ವಜನಿಕರು ಪಾರದರ್ಶಕವಾಗಿ ಫೋನ್ ಪೇ, ಗೂಗಲ್ ಪೇ ಮತ್ತು ಯಾವುದೇ ರೀತಿಯ ಆನ್ ಲೈನ್ ಪೇಮೆಂಟ್ ಆಪ್ ಮೂಲಕ ತೆರಿಗೆ ಪಾವತಿ ಮಾಡಿ ಸ್ಥಳದಲ್ಲಿಯೇ ರಸೀದಿ ಪಡೆದುಕೊಳ್ಳಬಹುದಾಗಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಇದರಿಂದಾಗಿ ಸಾರ್ವಜನಿಕರು ಕಚೇರಿಗೆ ಬರುವ ಅವಶ್ಯಕತೆ ಇರುವುದಿಲ್ಲ ಸಮಯ ಉಳಿತಾಯವಾಗುತ್ತದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ನಗರಸಭೆ ಆಯುಕ್ತ ಬಿ.ಬಸವರಾಜ್ ಮಾತನಾಡಿ, ನಗರಸಭೆಯಲ್ಲಿ ಒಟ್ಟು 35,535 ಆಸ್ತಿಗಳಿದ್ದು, ಈ ಪೈಕಿ 23,348 ಕಟ್ಟಡಗಳು, 4536 ವಾಣಿಜ್ಯ ಕಟ್ಟಡಗಳು, 75 ಕೈಗಾರಿಕಾ ಕಟ್ಟಡಗಳು ಮತ್ತು 7576 ಖಾಲಿ ನಿವೇಶನಗಳಿವೆ. ಆಸ್ತಿ ತೆರಿಗೆ ಒಟ್ಟು ಬೇಡಿಕೆ 15.35 ಕೋಟಿ ಇದ್ದು, ಇದರಲ್ಲಿ 8.86 ಕೋಟಿ ರೂ. ವಸೂಲಿಯಾಗಿದೆ. ನೀರಿನ ಕಂದಾಯ ಒಟ್ಟು ಬೇಡಿಕೆ 8.88 ಕೋಟಿ ರೂ. ಇದ್ದು ಒಟ್ಟು 18567 ವಸತಿ, 456 ವಾಣಿಜ್ಯ, 75 ಕೈಗಾರಿಕಾ ಸಂಪರ್ಕಗಳಿವೆ ಇವುಗಳಲ್ಲಿ 1.19 ಕೋಟಿ ರೂ. ಕಂದಾಯ ವಸೂಲಿಯಾಗಿದ್ದು, ಬಾಕಿ ವಸೂಲಾತಿಗೆ ಮನೆ ಮನೆಗೆ ತೆರಳಿ ತಿಳುವಳಿಕೆ ನೀಡಲಾಗುತ್ತಿದೆ ಎಂದರು.
ಮಳಿಗೆ ಬಾಡಿಗೆ ಬೇಡಿಕೆ 1.47 ಕೋಟಿ ರೂ. ಇದ್ದು, 55.63 ಲಕ್ಷ ರೂ. ವಸೂಲಿಯಾಗಿದೆ. ಉದ್ದಿಮೆ ಪರವಾನಗಿ ಒಟ್ಟು ಬೇಡಿಕೆ 81.4 ಲಕ್ಷ ರೂ.ಗಳಿದ್ದು, 31 ಲಕ್ಷ ರೂ. ವಸೂಲಿಯಾಗಿದೆ. ಬಾಕಿ ವಸೂಲಾತಿಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಬಾಡಿಗೆ ಕಟ್ಟದೇ ಇರುವ ಮಳಿಗೆಗಳಿಗೆ ಬಾಗಿಲು ಹಾಕಿಸುವಂತಹ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು ವೈರ್ ಲೆಸ್ ಥರ್ಮಲ್ ಪ್ರಿಂಟರ್ ಮತ್ತು ಫೋನ್ ಆಪ್ ನ ಸಹಾಯ ಪಡೆದು ಕಡ್ಡಾಯವಾಗಿ ತೆರಿಗೆ ಪಾವತಿಸಿ ಎಂದರು.
ನಗರಸಭೆ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.