ನೆಟ್ಟೆಕೆರೆ ಗ್ರಾಮದಲ್ಲಿ ನೀರು ಸಮರ್ಪಕವಾಗಿ ದೊರೆಯದ ಹಿನ್ನೆಲೆ
ಪ್ರತಿನಿಧಿ ವರದಿ ಬೇಲೂರು
ಮೂರು ದಿನಗಳ ಹಿಂದೆ ನೆಟ್ಟೆಕೆರೆ ಗ್ರಾಮದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಅಧ್ಯಕ್ಷೆ ಮಂಜುಳಾ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಗ್ರಾಪಂ ಅಧಿಕಾರಿ ರವಿಕುಮಾರ್, ಎರಡು ದಿನಗಳ ಹಿಂದೆ ಗ್ರಾಮಸ್ಥರು ಎರಡು ಕುಟುಂಬಗಳಿಗೆ ನೀರು ಸಿಕ್ಕಿಲ್ಲ ಎಂಬ ಉದ್ದೇಶದಿಂದ ಪ್ರತಿಭಟನೆ ನಡೆಸಿದರು. ಸುಮಾರು ೩೦ ವರ್ಷದಿಂದ ವಾಟರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿರುವ ಯೋಗೇಶ್ ಎಂಬುವರು ಕೇವಲ ನಟ್ಟೆಕೆರೆ ಗ್ರಾಮಮಾತ್ರವಲ್ಲದೆ ಪಕ್ಕದ ಸೂರಪುರ ಗ್ರಾಮಕ್ಕೂ ಸಹ ನೀರನ್ನು ಬಿಡುವ ಮೂಲಕ ಉತ್ತಮ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಎರಡು ದಿನಗಳ ಹಿಂದೆ ಬಂದಂತ ಭಾರಿ ಮಳೆಯಿಂದ ನೀರಿನ ಗೇಟ್ ವಾಲ್ ಸಂಪೂರ್ಣ ಮುಚ್ಚಿಹೋದ ಹಿನ್ನೆಲೆಯಲ್ಲಿ ನೀರು ಬಿಡಲು ಸಾಧ್ಯವಾಗಿರಲಿಲ್ಲ. ಅಲ್ಲದೆ ನೀರು ಬಿಡುವ ಮೋಟಾರ್ ಸುಟ್ಟುಹೋಗಿತ್ತು. ಅದನ್ನು ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ರತಿ ಮನೆ ಮನೆಗೆ ನೀರು ನೀಡುವ ಉದ್ದೇಶದಿಂದ ಜೆಜೆಎಂ ಯೋಜನೆಯಲ್ಲಿ ಕೆಲಸ ಮಾಡುವಾಗ ಕೆಲ ಪೈಪ್ ಗಳು ದುರಸ್ತಿಯಾಗಿದ್ದು, ಅವುಗಳನ್ನು ಸರಿಪಡಿಸದ ಕಾರಣ ನೀರು ಬಂದಿರಲಿಲ್ಲ. ಇನ್ನು ಹಲವು ಮನೆಗಳು ಎತ್ತರದಲ್ಲಿ ಇರುವುದರಿಂದ ನೀರು ಮೇಲೆ ಬರಲು ತುಂಬ ಕಷ್ಟವಾಗುತ್ತಿತ್ತು. ಅದಕ್ಕೆ ಬದಲಿ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಕೇವಲ ವೈಯಕ್ತಿಕ ದ್ವೇಷಗಳನ್ನು ಬಿಟ್ಟು ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ನಮ್ಮ ಬಳಿ ಹೇಳಿಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಗ್ರಾಮಸ್ಥರಾದ ಮೊಗಪ್ಪ, ಮಲ್ಲಿಗಮ್ಮ ಮಾತನಾಡಿ, ನಮ್ಮ ಸಮಸ್ಯೆಯನ್ನು ಬಗೆಹರಿಸಿ ಕುಡಿಯುವ ನೀರಿಗೆ ಪರಿಹಾರ ನೀಡಿದ್ದಾರೆ. ಇದು ಒಂದು ದಿನಕ್ಕೆ ಮಾತ್ರ ಆಗದೆ ಶಾಶ್ವತವಾಗಿ ಆಗಬೇಕು. ನಮ್ಮ ಸಮಸ್ಯೆ ಅರಿತು ನಮಗೆ ತುರ್ತಾಗಿ ಸಮಸ್ಯೆ ಬಗೆಹರಿಸಿದ ಶಾಸಕರಿಗೆ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ ಮಂಜುನಾಥ್ ಮಾತನಾಡಿ, ನಮ್ಮ ಗ್ರಾಪಂ ವ್ಯಾಪ್ತಿಗೆ ಸುಮಾರು ೧೬ ಗ್ರಾಮಗಳು ಬರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಎರಡು ದಿನಗಳ ಹಿಂದೆ ನಮ್ಮ ಗ್ರಾಮದಲ್ಲಿ ಯಾವುದೇ ನೀರಿನ ಸಮಸ್ಯೆ ಇರಲಿಲ್ಲ. ಕೆಲವರಿಗೆ ನೀರು ಸಿಕ್ಕಿಲ್ಲ ಎಂಬ ಉದ್ದೇಶದಿಂದ ಪ್ರತಿಭಟನೆ ಮಾಡಿದ್ದರು. ಅದರಂತೆ ನಾವು ಅಧಿಕಾರಿಗಳ ಜತೆ ಸ್ಥಳಕ್ಕೆ ಬಂದು ಶಾಶ್ವತ ಪರಿಹಾರ ಮಾಡಿದ್ದೇವೆ ಎಂದು ಹೇಳಿದರು.
ಗ್ರಾಮಸ್ಥರಾದ ಅಮ್ಮಯಮ್ಮ ಕೃಷ್ಣಮೂರ್ತಿ, ವಿಜಯ್, ನಿತಿನ್, ಪರಮೇಶ್, ಪುಟ್ಟಸ್ವಾಮಿ, ಅರುಣ್, ಯಶೋದ, ಕೃತಿ, ಭಾನು ಸೇರಿದಂತೆ ಇತರರು ಹಾಜರಿದ್ದರು.
ಕುಡಿಯುವ ನೀರಿಗೆ ತೊಂದರೆಯಾಗುತ್ತಿದ್ದರೂ ಕೆಲವರು ಸಂಪ್ ತುಂಬಿದ್ದರೂ ನೀರನ್ನು ನಿಲ್ಲಿಸದೆ ವ್ಯರ್ಥ ಮಾಡುತ್ತಿದ್ದಾರೆ. ಕೂಡಲೇ ಸಂಪ್ ಗಳಿಗೆ ನೀಡಿರುವ ಸಂಪರ್ಕವನ್ನು ಕಡಿತಗೊಳಿಸಲು ವಾಟರ್ ಮೇನ್ ಗೆ ಸೂಚಿಸಲಾಗಿದೆ.
-ರವಿಕುಮಾರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ