ಪ್ರತಿನಿಧಿ ವರದಿ ಹುಣಸೂರು
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ತಾಲೂಕಿನಾದ್ಯಂತ ಮತದಾರರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದು, ಮತದಾನ ಶಾಂತಿಯುತವಾಗಿ ನಡೆಯಿತು.
ಶುಕ್ರವಾರ ಬಿಸಿಲಿನ ಕಾವು ಜನರನ್ನು ತಲ್ಲಣಗೊಳಿಸಿತ್ತು. ಬೆಳಗಿನಿಂದ ಮತದಾನ ನಿಧಾನಗತಿಯಲ್ಲಿ ಆರಂಭಗೊಂಡು ಮಧ್ಯಾಹ್ನ ೩ ರ ನಂತರ ಬಿರುಸಿಗೊಂಡಿತು. ಮತದಾನದಲ್ಲಿ ವಯೋವೃದ್ಧರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಮೊದಲ ಬಾರಿ ಮತಚಲಾಯಿಸಿದ ಯುವ ಸಮೂಹ ಮತ ಚಲಾವಣೆಯ ನಂತರ ಸಂತೃಪ್ತ ಭಾವ ಹೊಂದಿದ್ದು ಕಂಡುಬಂದಿತು. ಒಂದೆಡೆ ಇವಿಎಂ ಮತ್ತೊಂದೆಡೆ ವಿವಿ ಪ್ಯಾಟ್ ಕೈಕೊಟ್ಟಿತ್ತು.
ಶಾಸಕ ಜಿ.ಡಿ.ಹರೀಶ್ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸರತಿಯ ಸಾಲಿನಲ್ಲಿ ನಿಂತು ಮತಚಲಾಯಿಸಿದರು. ಗಿರಿಜನ ಹಾಡಿಗಳಲ್ಲೂ ಮತದಾನ ಬಿರುಸಿನಿಂದ ನಡೆಯಿತು.
ಕೈಕೊಟ್ಟ ಇವಿಎಂ
ಬೆಳಗಿನಿಂದಲೇ ಬಿಸಿಲು ಜನರ ತಲೆಬಿಸಿಮಾಡಿತ್ತು. ಎಲ್ಲ ಮತಗಟ್ಟೆಗಳಲ್ಲಿ ಅಧಿಕಾರಿಗಳು ಮಾಕ್ಪೋಲ್ ಕಾರ್ಯವನ್ನು ಸಂಪನ್ನಗೊಳಿಸಿಕೊಂಡು ಮತದಾರರ ನಿರೀಕ್ಷೆಯಲ್ಲಿ ಕುಳಿತಿದ್ದರು. ೭.೩೦ರ ಸಮಯದಲ್ಲಿ ಮತಕೇಂದ್ರಕ್ಕೆ ಮತದಾರರು ತೆರಳಲು ಆರಂಭಿಸಿದರು. ಬೆಳಗ್ಗೆ ೧೧ರ ಸಮಯದಲ್ಲಿ ಕೂಡ ತಾಲೂಕಿನಾದ್ಯಂತ ಶೇ.೨೨ರಷ್ಟು ಮಾತ್ರ ಮತದಾನವಾಗಿತ್ತು. ಮಧ್ಯಾಹ್ನ ೩.೩೦ರ ವೇಳೆಗೆ ಈ ಪ್ರಮಾಣ ಶೇ.೫೫ರ ಗಡಿ ತಲುಪಿತ್ತು. ಹುಣಸೂರು ನಗರವ್ಯಾಪ್ತಿಯ ಶಬ್ಬೀರ್ ನಗರದ ಮತಗಟ್ಟೆಯೊಂದರಲ್ಲಿ ಮಾತ್ರ ಇವಿಎಂ ತಾಂತ್ರಿಕ ಕಾರಣಗಳಿಂದ ಕೈಕೊಟ್ಟು, ಅರ್ಧ ತಾಸು ಮತದಾನ ಪ್ರಕ್ರಿಯೆಗೆ ಅಡಚಣೆ ಉಂಟಾಗಿತ್ತು, ನಂತರ ಮತಯಂತ್ರವನ್ನು ದುರಸ್ತಿಗೊಳಿಸಿ ಮತದಾನ ಸುಲಲಿತವಾಗಿ ಮುನ್ನಡೆಯುವಂತೆ ಮಾಡಲಾಯಿತು
ಸಂಜೀವಿನಿ ಒಕ್ಕೂಟದ ಸದಸ್ಯರ ಸಂಭ್ರಮ:
ತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯಲ್ಲಿ ಎನ್ಆರ್ಎಲ್ಎಂ ಸಂಜೀವಿನಿ ಒಕ್ಕೂಟದ ಸದಸ್ಯರು ಸಖಿ ವಿಶೇಷ ಮತಗಟ್ಟೆಗಳಿಗೆ ಒಂದಾಗಿ ತೆರಳಿ ಮತಚಲಾಯಿಸಿದರು. ಹಳೇಬೀಡು, ಮನುಗನಹಳ್ಳಿ, ಬೀಜಗನಹಳ್ಳಿ, ಬಿಳಿಕೆರೆ ಮುಂತಾದ ಮತಗಟ್ಟೆಗಳಲ್ಲಿ ಸಂಘದ ಸದಸ್ಯರು ಎಲ್ಲರೂ ಒಂದೇ ತೆರನಾದ ಗುಲಾಬಿ ಬಣ್ಣದ ಸೀರೆಯನ್ನುಟ್ಟು ಮತಚಲಾಯಿಸಿದ ನಂತರ ತೋರುಬೆರಳನ್ನು ತೋರಿ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ಹಾಡಿಗಳಲ್ಲಿ ಗಿರಿಜನರಿಂದ ಮತದಾನ:
ತಾಲೂಕಿನ ೫೦ಕ್ಕೂ ಹೆಚ್ಚು ಗಿರಿಜನ ಹಾಡಿಗಳ ಮತದಾರರು ಮತಗಟ್ಟೆಗೆ ತೆರಳಿ ಮತಚಲಾಯಿಸಿದರು. ತಾಲೂಕಿನ ನಾಗಪುರ, ಉಮ್ಮತ್ತೂರು, ನೇರಳಕುಪ್ಪೆ ಮುಂತಾದ ಹಾಡಿಗಳಲ್ಲಿನ ಆಶ್ರಮಶಾಲೆಗಳಲ್ಲಿ ಚುನಾವಣಾ ಆಯೋಗ ಸ್ಥಾಪಿಸಿದ್ದ ಪಾರಂಪರಿಕ ಮತಗಟ್ಟೆ ಕೇಂದ್ರಗಳಲ್ಲಿ ಗಿರಿಜನರು ಕುಟುಂಬ ಸಮೇತ ತೆರಳಿ ಮತಚಲಾಯಿಸಿದರು. ಮತಗಟ್ಟೆಗಳಲ್ಲಿ ಹಾಡಿಯ ಜನರಿಗಾಗಿ ಪಾನಕ ಮಾಡಿ ನೀಡಲಾಯಿತು. ವಿಶೇಷವೆಂದರೆ ಈ ಬಾರಿ ಗಿರಿಜನರು ಮತದಾನ ಮಾಡುವ ಸಲುವಾಗಿ ಕೂಲಿ ಕೆಲಸಕ್ಕೆ ತೆರಳದೇ ಊರಿನಲ್ಲೇ ಇದ್ದು ಮತಚಲಾಯಿಸಿ ಸಂಭ್ರಮಿಸಿದರು.
ಅಂಧೆಯಿಂದ ಮತಚಲಾವಣೆ
ಬನ್ನಿಕುಪ್ಪೆ ಮತಗಟ್ಟೆಯಲ್ಲಿ ಐಟಿಐ ವ್ಯಾಸಂಗ ಮಾಡಿರುವ ಅಂಧೆ ರೇಣುಕ ತನ್ನ ತಾಯಿ ನಾಗಮ್ಮರ ಸಹಾಯದೊಂದಿಗೆ ಮತಗಟ್ಟೆಗೆ ತೆರಳು ಹಕ್ಕನ್ನು ಚಲಾಯಿಸಿದರು. ತಾವು ಈವರೆಗೆ ಮೂರು ಬಾರಿ ಮತದಾನ ಮಾಡಿದ್ದು,ಬ್ರೈಲ್ ಲಿಪಿ ತಮಗೆ ತಿಳಿದಿದ್ದು, ಇವಿಎಂ ಯಂತ್ರದಲ್ಲಿ ಬ್ರೈಲ್ ಲಿಪಿ ಇರದ ಕಾರಣ ತಾಯಿಯವರ ಸಹಾಯದೊಂದಿಗೆ ಮತ ಚಲಾಯಿಸುತ್ತಿದ್ದೇನೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯುತ ಹಕ್ಕಾಗಿರುವ ಮತವನ್ನು ಚಲಾಯಿಸುವ ಮೂಲಕ ದೇಶಕಟ್ಟುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಮಾಧ್ಯಮಕ್ಕೆ ತಿಳಿಸಿದರು.
ವಯೋವೃದ್ಧರಿಗೂ ಆಸಕ್ತಿ:
ತಾಲೂಕಿನ ವಿವಿದೆಡೆ ವಯೋವೃದ್ದರು ಅಂಗವಿಕಲರು ಕೂಡ ಮತಚಲಾಯಿಸಿ ಯುವಕರಿಗೆ ಸಡ್ಡು ಹೊಡೆದರು. ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಅಮೀನಾಬೀ, ಶಾರದಾ, ಕರೀಗೌಡರ ಬೀದಿ ಶಾಲೆಯ ಮತಗಟ್ಟೆಲ್ಲಿ ಜಗದಂಬಾ ಸೇರಿದಂತೆ ಬನ್ನಿಕುಪ್ಪೆ ಗ್ರಾಮದ ೯೦ ವರ್ಷದ ಪಾರ್ವತಮ್ಮ ಮತ್ತು ಅಂಗವಿಕಲ ಸುರೇಶ್ ತಮ್ಮ ಕುಟುಂಬದ ಸದಸ್ಯರ ನೆರವಿನೊಂದಿಗೆ ಮತಗಟ್ಟೆಗೆ ಬಂದರು.ಮತಗಟ್ಟೆಯಲ್ಲಿದ್ದ ವೀಲ್ಚೇರ್ನಲ್ಲಿ ಕುಳಿತು ಕೇಂದ್ರದೊಳಗೆ ತೆರಳಿ ಮತಚಲಾಯಿಸಿದರು.
ಹೆಗ್ಗಂದೂರಿನಲ್ಲಿ ವಿವಿ ಪ್ಯಾಟ್ ಸಮಸ್ಯೆ:
ತಾಲೂಕಿನ ಹನಗೋಡು ಹೋಬಳಿ ಹೆಗ್ಗಂದೂರು ಗ್ರಾಮದ ಮತಗಟ್ಟೆಯಲ್ಲಿ ವಿವಿ ಪ್ಯಾಟ್ ಕೈಕೊಟ್ಟ ಕಾರಣ ಮತದಾನ ವಿಳಂಬವಾಗಿ ನಡೆಯಿತು. ಮಧ್ಯಾಹ್ನ ೪ ಗಂಟೆಯಾದರೂ ಶೇ.೫೦ರಷ್ಟು ಮಾತ್ತ ಮತಚಲಾವಣೆಯಾದ ಕಾರಣ ಇಡೀ ಮತಗಟ್ಟೆ ತುಂಬ ಮತದಾರರ ಸಂತೆಯೇ ನೆರೆದಿತ್ತು. ಈ ಗ್ರಾಮಕ್ಕೆ ಎರಡು ಮತಗಟ್ಟೆಗಳನ್ನು ಸ್ಥಾಪಿಸಿದಲ್ಲಿ ಮಾತ್ರ ಸಮಸ್ಯೆ ಪರಿಹಾರವಾಗಲು ಸಾಧ್ಯವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಪತ್ರಿಕೆಯೊಂದಿಗೆ ಮಾತನಾಡಿ, ವಿವಿ ಪ್ಯಾಟ್ ದುರಸ್ತಿಯಾಗಿದ್ದರೆ ಅದನ್ನು ಮಾತ್ರ ಬದಲಿಸಲು ಆಯೋಗ ಅವಕಾಶ ನೀಡಿದೆ. ಈ ಕುರಿತು ಮಾಹಿತಿ ಪಡೆದು ಕ್ರಮವಹಿಸಲಾಗಿದೆ. ಎಷ್ಟೇ ಸಮಯವಾದರೂ ಕೂಡ ಮತಗಟ್ಟೆಯಲ್ಲಿರುವ ಎಲ್ಲರಿಗೂ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮತಚಲಾಯಿಸಿದ ಮಠಾಧೀಶರು:
ಗಾವಡಗೆರೆ ಗುರುಲಿಂಗ ಜಂಗಮದೇವರ ಮಠದ ಶೀ ನಟರಾಜಮಹಾಸ್ವಾಮಿಗಳು ಮತಚಲಾಯಿಸಿದರು. ನಂತರ ಮಾತನಾಡಿ, ಮತದಾನ ಎನ್ನುವುದು ದೇಶದ ಪ್ರತಿಯೊಬ್ಬ ಪ್ರಜೆಯ ಪವಿತ್ರವಾದ ಕರ್ತವ್ಯವಾಗಿದೆ. ಯಾರೊಬ್ಬರೂ ಇದರಿಂದ ವಿಮುಖರಾಗಬಾರದೆಂದು ತಿಳಿಸಿದರು.
ಲೀಡ್ ಸಿಗುವ ವಿಶ್ವಾಸವಿದೆ:
ಮತಚಲಾಯಿಸಿದ ನಂತರ ಮಾದ್ಯಮದೊಂದಿಗೆ ಮಾತನಾಡಿದ ಶಾಸಕ ಜಿ.ಡಿ.ಹರೀಶ್ಗೌಡ, ತಾಲೂಕಿನಾದ್ಯಂತ ಹಲವಾರು ಮತಗಟ್ಟೆಗಳಿಗೆ ತಾವು ಈಗಾಗಲೇ ಭೇಟಿ ನೀಡಿದ್ದು, ಎಲ್ಲೆಡೆ ಮೈತ್ರಿಪಕ್ಷದ ಅಭ್ಯರ್ಥಿಯ ಪರ ಒಲವು ಕಂಡುಬಂದಿದೆ. ಯುವಮತದಾರರು ಮತ್ತು ಮೊದಲ ಬಾರಿ ಮತಚಲಾಯಿಸುತ್ತಿರುವ ಮತದಾರರು ಯದುವೀರ್ ಒಡೆಯರ್ ಪರ ಮತಚಲಾಯಿಸಿರುವುದಾಗಿ ಹೇಳಿ ಸಂಭ್ರಮಿಸುತ್ತಿದ್ದಾರೆ. ತಾಲೂಕಿನಲಿ ಮೈತ್ರಿ ಅಭ್ಯರ್ಥಿಗೆ ಕನಿಷ್ಟ ೨೫ ಸಾವಿರ ಮತಗಳ ಲೀಡ್ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.
೨೬ಊUಓ೧: ಹುಣಸೂರು ತಾಲೂಕು ನಾಗಪುರ ಗಿರಿಜನ ಹಾಡಿಯಲ್ಲಿ ಗಿರಿಜನರು ಸಂಭ್ರಮದಿAದ ಮತಚಲಾಯಿಸಿದರು.
೨೬ಊUಓ೨: ಬನ್ನಿಕುಪ್ಪೆ ಮತಗಟ್ಟೆಯಲ್ಲಿ ಅಂಧೆ ರೇಣುಕ ಮತಗಟ್ಟೆ ಕೇಂದ್ರದಲ್ಲಿ ತಾಯಿ ನಾಗಮ್ಮರ ಸಹಕಾರದೊಂದಿಗೆ ಮತಚಲಾಯಿಸಿದರು.
೨೬ಊUಓ೩: ಮನುಗನಹಳ್ಳಿ ಸಖಿ ಮತಗಟ್ಟೆಯಲ್ಲಿ ಎನ್ಆರ್ಎಲ್ಎಂ ಸಂಜೀವಿನಿ ಒಕ್ಕೂಟದ ಸದಸ್ಯರು ಮತಚಲಾಯಿಸಿ ಸಂಭ್ರಮಿಸಿದರು
೨೬ಊUಓ೪:
೨೬ಊUಓ೫: ಹರ್ಷಿತ್,
೨೬ಊUಓ೬: ಡಿ.ಎನ್.ಮನೋಜ್
೨೬ಊUಓ೭: ಶಾಸಕ ಜಿ.ಡಿ.ಹರೀಶ್ಗೌಡ ಮತಚಲಾಯಿಸಿದರು.
೨೬ಊUಓ೮: ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜಸ್ವಾಮಿಗಳು ಮತಚಲಾಯಿಸಿದರು.