ಬೆಂಗಳೂರು: ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಕಿ ಇಲ್ಲದೇ ಹೊಗೆಯಾಡಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ಮಾಡಿದ್ದಾರೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪೆನ್ಡ್ರೈವ್ ಕೊಟ್ಟರು ಅಂತ ಹೇಳು. ಅದಕ್ಕಾಗಿ ಆಫರ್ ಕೊಟ್ಟಿದ್ದಾರೆ ಎಂಬ ದೇವರಾಜೇಗೌಡ ಹೇಳಿಕೆ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರನ್ನ ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ದೇವರಾಜೇಗೌಡ ಹೇಳಿರುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಗೆ ಕೆಟ್ಟ ಹೆಸರು ತರಲು ಮಾಡಿರುವ ಪ್ಲ್ಯಾನ್. ಒಕ್ಕಲಿಗರನ್ನ ಮುಗಿಸಲು ಕಾಂಗ್ರೆಸ್ ಪಕ್ಷ ಹೊರಟಿದೆ. ಪೆನ್ಡ್ರೈವ್ ಕೇಸ್ ತನಿಖೆಗೆ ಸಿಬಿಐಗೆ ವಹಿಸಬೇಕು. ಆದರೆ ಸಿಬಿಐಗೆ ವಹಿಸುವುದಕ್ಕೆ ಅವರಿಗೆ ಭಯ. ಸಿಬಿಐ ತನಿಖೆ ಆದರೆ ಸರ್ಕಾರದವರು ಒಳಗೆ ಹೋಗುತ್ತಾರೆ. SIT ತನಿಖೆ ಅಂದರೆ ಸರ್ಕಾರದ ಪ್ರಾಯೋಜಿತ ತನಿಖೆ ಎಂದು ಕಿಡಿಕಾರಿದ್ದಾರೆ.
ತಪ್ಪು ಮಾಡಿದವರ ಮೇಲೆ ಕ್ರಮಕೈಗೊಳ್ಳಿ ಅಭ್ಯಂತರವಿಲ್ಲ. ಆದ್ರೆ, ಪೆನ್ಡ್ರೈವ್ ಹಂಚಿದವರ ಬಗ್ಗೆಯೂ ತನಿಖೆ ಆಗಲಿ. ನ್ಯಾಯಾಂಗ ತನಿಖೆ ಆದ್ರೆ ಮಾತ್ರ ಸತ್ಯ ಹೊರಬರುತ್ತದೆ ಇಲ್ಲದಿದ್ರೆ ಸತ್ಯ ಮುಚ್ಚಿಹಾಕುವ ಕೆಲಸ ಆಗುತ್ತೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಬಂದರೆ ಕೊಲೆಗಡುಕರಿಗೆ ಹಬ್ಬ: ಈ ರಾಜ್ಯ ಸರ್ಕಾರವನ್ನೇ ಗಲ್ಲಿಗೇರಿಸಬೇಕು
ಕರ್ನಾಟಕ ಕ್ರೈಂ ರಾಜ್ಯವಾಗಿದೆ. ಗೃಹಸಚಿವ ಅಣತಿಯಂತೆ ಏನೂ ನಡೆಯುತ್ತಿಲ್ಲ. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಮಾಸುವ ಮುನ್ನ ಮತ್ತೊಂದು ಹತ್ಯೆ ಮಾಡಲಾಗಿದೆ. ಕಾಂಗ್ರೆಸ್ ಬಂದರೆ ಕೊಲೆಗಡುಕರಿಗೆ ಹಬ್ಬ. ಈ ರಾಜ್ಯ ಸರ್ಕಾರವನ್ನೇ ಗಲ್ಲಿಗೇರಿಸಬೇಕು. ಭಯೋತ್ಪಾದಕರು, ಕೊಲೆಗಡುಕರಿಗೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಬಂದ್ರೆ ಕೊಲೆಗಡುಕರ ಸುರಿಮಳೆ ಆಗುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.