ಹಬ್ಬ ಹಿನ್ನೆಲೆ ಸಂಭ್ರಮ । ನಗರದಲ್ಲಿ ಕಳೆಕಟ್ಟಿದ ಗೌರಿ-ಗಣೇಶ । ಬೆಲೆ ಏರಿಕೆಯಿಂದಾಗಿ ಅಳೆದುತೂಗಿ ಖರೀದಿ
ಪ್ರತಿನಿಧಿ ವರದಿ ಚಾಮರಾಜನಗರಗೌರಿ- ಗಣೇಶ ಹಬ್ಬ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಹಬ್ಬದ ಮುನ್ನಾ ದಿನವಾದ ಶುಕ್ರವಾರ ಜಿಲ್ಲಾದ್ಯಂತ ಮಾರುಕಟ್ಟೆಯಲ್ಲಿ ವ್ಯಾಪಾರದ ಭರಾಟೆ ಜೋರಾಗಿ ನಡೆಯಿತು. ಆದರೆ ಬೆಲೆ ಏರಿಕೆಯಿಂದಾಗಿ ಜನರು ಅಳೆದುತೂಗಿ ಖರೀದಿಸುವಂತಾಗಿದೆ.
ಬೆಲೆ ಏರಿಕೆ ನಡುವೆಯೂ ಹಬ್ಬಕೆ ಬೇಕಾದ ಅಗತ್ಯ ವಸ್ತುಗಳಾದ ತಾವರೆ ಹೂ, ಸೇವಂತಿ ಸೇರಿದಂತೆ ಬಗೆ ಬಗೆಯ ಹೂ, ಬಾಳೆ ಹಣ್ಣು, ತರಕಾರಿಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ಕೊಳ್ಳಲು ಜನರು ನಗರದಲ್ಲಿ ಮುಗಿಬಿದ್ದಿದ್ದರು. ಮಾರುಕಟ್ಟೆಯಲ್ಲಿ ಈ ಬಾರಿ ತರಕಾರಿ, ಹೂ, ಹಣ್ಣುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.
ದುಬಾರಿಯಾದ ಹೂ, ಹಣ್ಣು: ಮಾರುಕಟ್ಟೆಯಲ್ಲಿ ಒಂದು ಮಾರು ಸೇವಂತಿಗೆ 100ರಿಂದ 120 ರೂ., ಕಾಕಡ 120 ರೂ., ಮಲ್ಲಿಗೆ 80 ರಿಂದ 100ರೂ., ಚೆಂಡು 30ರಿಂದ 40ರೂ., ಗುಲಾಬಿ ಕೆಜಿವೊಂದಕ್ಕೆ 300 ರಿಂದ 350 ರೂ., ತಾವರೆ ಹೂ ಒಂದಕ್ಕೆ 15 ರಿಂದ 20 ರೂ.ಗೆ ಮಾರಾಟವಾಗುತ್ತಿತ್ತು. ಇನ್ನು ಕೆಜಿ ಸೇಬಿನ ಹಣ್ಣಿಗೆ 120 ರಿಂದ 150 ರೂ., ದಾಳಿಂಬೆ 150 ರಿಂದ 180 ರೂ., ಏಲಕ್ಕಿ ಬಾಳೆಹಣ್ಣು ಕೆಜಿಗೆ 100 ರಿಂದ 120 ರೂ. ಹಾಗೂ ಪಚ್ಚಬಾಳೆ 40 ರಿಂದ 50 ರೂ., ದ್ರಾಕ್ಷಿ 150ರೂ. ಆಗಿತ್ತು. ಬಾಳೆಕಂದು ಒಂದಕ್ಕೆ 5 ರಿಂದ 10 ರೂ. ಹಾಗೂ ಮಾವಿನ ಸೊಪ್ಪು ಒಂದು ಕಟ್ಟಿಗೆ 10 ರೂ.ಗೆ ಮಾರಾಟ ವಾಗುತ್ತಿತ್ತು.
ವ್ಯಾಪಾರ ಭರಾಟೆ ಜೋರು: ಗೌರಿ-ಗಣೇಶ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಭರಾಟೆ ಜೋರಾಗಿತ್ತು. ಎತ್ತ ನೋಡಿದರೂ ಜನರು ಹೂ-ಹಣ್ಣುಗಳನ್ನು ಕೊಂಡುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದಲೇ ಗ್ರಾಹಕರು ಬಂದು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೂ ಗ್ರಾಹಕರು ಉತ್ಸಾಹದಿಂದ ಹೂ, ಹಣ್ಣು ಖರೀದಿಸುವ ಭರಾಟೆ ಜೋರಾಗಿ ನಡೆಯಿತು.
ಗೌರಿ-ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳ ಶೃಂಗರಿಸುವ ಹಿನ್ನೆಲೆಯಲ್ಲಿ ಅಲಂಕಾರಿಕ ವಸ್ತುಗಳನ್ನು ಮಾರಾಟ ಜೋರಾಗಿತ್ತು. ಅಲಂಕಾರಿಕ ವಸ್ತುಗಳನ್ನು ಕೊಂಡುಕೊಳ್ಳಲು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ವಸ್ತುಗಳನ್ನು ಕೊಂಡು ಕೊಳ್ಳಲು ಅಂಗಡಿಗಳ ಮುಂದೆ ಮುಗಿಬಿದ್ದರು.
6ಸಿಎಚ್ಎನ್.1: ಗೌರಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಜನರು ಚಾಮರಾಜನಗರದ ಚಿಕ್ಕ ಅಂಗಡಿಬೀದಿಯ ಅಂಗಡಿಗಳ ಮುಂದೆ ಮುಗಿಬಿದ್ದರು.