ಕೆಟ್ಟು ನಿಂತ ಬೆಸಗರಹಳ್ಳಿಯ ನೀರಿನ ಘಟಕಗಳು
ಅಧಿಕಾರಿಗಳ ನಿರ್ಲಕ್ಷ್ಯ
ಬೆಸಗರಹಳ್ಳಿ ಮಧುಕುಮಾರ ಮದ್ದೂರು
ಜಿಲ್ಲೆಯಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ.
ನಿರ್ವಹಣೆ ಕೊರತೆಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿದ್ದು, ಇಲ್ಲಿನ ಜನರು ಶುದ್ಧ ಕುಡಿಯುವ ನೀರಿಗಾಗಿ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉದ್ಭವಿಸಿದೆ.
ಬೆಸಗರಹಳ್ಳಿ ಗ್ರಾಮ ಪಂಚಾಯಿತಿಯ ಮಹರ್ನವಮಿದೊಡ್ಡಿ, ಪಣ್ಣೆದೊಡ್ಡಿ, ಈರೇಗೌಡನದೊಡ್ಡಿ, ಕೆರೆಮೇಗಳದೊಡ್ಡಿ ಸೇರಿದಂತೆ ಬೆಸಗರಹಳ್ಳಿಯ 5 ವಾರ್ಡ್ ಗಳಲ್ಲಿ 16 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. 27 ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿನಿಧಿಸುವ ಬೆಸಗರಹಳ್ಳಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಅನುದಾನದಲ್ಲಿ ಗ್ರಾಮ ಪಂಚಾಯಿತಿಯ ಓವರ್ ಟ್ಯಾಂಕ್ ಕೆಳಗಡೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದಾರೆ, ಆದರೆ ಪಂಚಾಯಿತಿ ತೆರೆದಿದ್ದಾಗ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕದ ಬಾಗಿಲು ತೆಗೆಯುತ್ತಾರೆ. ಉಳಿದಂತೆ ಪಂಚಾಯಿತಿ ಸಿಬ್ಬಂದಿಗಳು ಬೀಗ ಹಾಕಿಕೊಳ್ಳುತ್ತಾರೆ. ಈ ಘಟಕ ನಿಷ್ಕ್ರಿಯವಾಗಿದ್ದು ಜನಜಂಗುಳಿಯ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು ಎಂಬುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಕರ್ನಾಟಕ ಪಬ್ಲಿಕ್ ಶಾಲೆಯ ಸಮೀಪ ಮತ್ತೊಂದು ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಅದು ಸಂಪೂರ್ಣ ಹಾಳಾಗಿದೆ ಈ ಪ್ರದೇಶದಲ್ಲಿ ಮುಸ್ಲಿಂ ಮತ್ತು ತಮಿಳು ಕಾಲೋನಿಗಳಿದ್ದು ಅಲ್ಲಿನ ಜನರು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.
ಶಾಸಕ ಕೆ.ಎಂ.ಉದಯ್ ಶಾಸಕರಾಗುವುಕ್ಕಿಂತ ಮೊದಲೇ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪಣ್ಣೆದೊಡ್ಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದರು. ಅದು ಈಗ ಕೆಟ್ಟು ನಿಂತಿದ್ದು ಅಲ್ಲಿನ ನಿವಾಸಿಗಳು 2 ಕಿ.ಮೀ.ದೂರದ ಬೆಸಗರಹಳ್ಳಿ ಗ್ರಾಮದ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಿದ್ದಾರೆ.
ಈರೇಗೌಡನದೊಡ್ಡಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹಲವು ತಿಂಗಳುಗಳೆ ಕಳೆದಿವೆ. ಇಲ್ಲಿನ ನಿವಾಸಿಗಳು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ದ್ವಿಚಕ್ರ ವಾಹನ ಇರುವವರು ಎರಡು ಕಿಲೋಮೀಟರ್ ದೂರವಿರುವ ಬೆಸಗರಹಳ್ಳಿಗೆ ಬಂದು ಶುದ್ಧ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವ ಪರಿಪಾಠವನ್ನು ಬೆಳಸಿಕೊಂಡಿದ್ದಾರೆ. 16 ಸಾವಿರ ಜನಸಂಖ್ಯೆ ಇರುವ ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಶುದ್ಧ ಕುಡಿಯುವ ನೀರಿನ ಘಟಕ ಸಾಲದಾಗಿದೆ. ಇದರಿಂದ ಈ ಭಾಗದ ನಿವಾಸಿಗಳು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಿದ್ದಾರೆ. ಸಾಲಿನಲ್ಲಿ ನಿಂತು ನೀರು ಕೊಂಡ್ಯೋಯುವುದೇ ಸಾಹಸಮಯವಾದ ಕೆಲಸವಾಗಿದೆ. ಆದ್ದರಿಂದ ತಕ್ಷಣ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸ್ಥಳೀಯರಾದ ವೆಂಕಟೇಶ್, ಚೇತನ್ ಕುಮಾರ್ ಇತರರು ಒತ್ತಾಯಿಸಿದ್ದಾರೆ.
—————
ಕೋಟ್
ಬೆಸಗರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಲಾಗುವುದು. ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಶೀಘ್ರಕ್ರಮ ವಹಿಸಲಾಗುವುದು.
-ಟಿ.ಎನ್. ಕೊಂದಡರಾಮ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಮದ್ದೂರು.
ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸಂಬಂಧಿಸಿದವರಿಗೆ ಸೂಚಿಸಿ ತಕ್ಷಣ ಸಮಸ್ಯೆಯನ್ನು ಬಗೆಹರಿಸಲಾಗುವುದು. ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ದೊರೆಯಬೇಕು ಎಂಬುದು ನಮ್ಮ ಆದ್ಯತೆಯಾಗಿದ್ದು, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಪಂಚಾಯಿತಿ ಅಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡುತ್ತೇನೆ.
-ಜಿ.ಆರ್. ಮಂಜುನಾಥ್. ಕಾರ್ಯನಿರ್ವಹಣಾಧಿಕಾರಿ ತಾ.ಪಂ. ಮದ್ದೂರು.
ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿರುವುದರಿಂದ ಶುದ್ಧ ಕುಡಿಯುವ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದ್ದರೂ ಸಂಬಂಧಿಸಿದವರು ಯಾವುದೇ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿ. ಅಧಿಕಾರಿಗಳು ಚುನಾವಣೆಯ ನೆಪ ಹೇಳಿಕೊಂಡು ಸಾರ್ವಜನಿಕರನ್ನು ಶುದ್ಧ ಕುಡಿಯುವ ನೀರಿನಿಂದ ವಂಚಿಸುತ್ತಿದ್ದಾರೆ. ತಕ್ಷಣ ಸಮಸ್ಯೆ ಬಗೆಹರಿಸಬೇಕು.
– ಶ್ರೀಧರ್, ಚುಂಚೇಗೌಡನದೊಡ್ಡಿ ಸ್ಥಳೀಯ ವಾಸಿ.
ಮಾತಿಗೆ ಮಾತ್ರ ದೊಡ್ಡ ಪಂಚಾಯಿತಿ ಆದರೆ ಸೌಲಭ್ಯಗಳಲ್ಲಿ ಬಹಳ ಹಿಂದುಳಿದಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಶುದ್ಧ ಕುಡಿಯುವ ನೀರಿಗಾಗಿ ಅಲೆದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಿ ಮೂಲ ಸೌಕರ್ಯಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕಾರ್ಯ ಪ್ರವೃತ್ತರಾಗಬೇಕು.
-ಬಿ.ಆರ್. ಚೇತನ್ ಕುಮಾರ್, ತಾಲೂಕು ಸಂಘಟನಾ ಸಂಚಾಲಕ ಡಿಎಸ್ಎಸ್.
ಸಂಬಂಧಿಸಿದ ಪೋಟೋಗಳಿವೆ