ನವದೆಹಲಿ: ಕಳೆದ ವಾರ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರಕ್ಕೆ ವಹಿಸಿಕೊಂಡ ಬಳಿಕ ಮೊದಲ ಕ್ರಮ ತೆಗೆದುಕೊಂಡಿದ್ದು ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಬಿಡುಗಡೆಗೆ ಇರುವ ಕಡತಕ್ಕೆ ಸಹಿಹಾಕಿದ್ದು. ಜೂನ್ 18ರಂದು 9.26 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ತಲಾ 2,000 ರೂನಂತೆ ಒಟ್ಟು 20,000 ಕೋಟಿ ರೂ ಬಿಡುಗಡೆ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾರಾಣಸಿಗೆ ಭೇಟಿ ನೀಡಿದ ವೇಳೆ ಪಿಎಂ ಕಿಸಾನ್ ಯೋಜನೆ ಹಣವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಪಿಎಂ ಆದ ಬಳಿಕ ವಾರಾಣಸಿ ಕ್ಷೇತ್ರಕ್ಕೆ ನೀಡಲಿರುವ ಮೊದಲ ಭೇಟಿ ಅದು. ರೈತರಿಗೆ ಕೃಷಿ ಕಾರ್ಯಗಳಿಗೆ ಸಹಾಯವಾಗುವ ರೀತಿಯಲ್ಲಿ ತರಬೇತಿ ಕೊಡಲಾದ ಸ್ವಸಹಾಯ ಸಂಘಗಳ 30,000 ಕೃಷಿ ಸಖಿಯರಿಗೆ ಈ ವೇಳೆ ಪ್ರಧಾನಿಗಳು ಪ್ರಮಾಣಪತ್ರಗಳನ್ನು ನೀಡಲಿದ್ದಾರೆ.
ಏನಿದು ಕೃಷಿ ಸಖಿ ಯೋಜನೆ?
ದೇಶಾದ್ಯಂತ ಇರುವ ವಿವಿಧ ಸ್ವಸಹಾಯ ಸಂಘಗಳಿಂದ 90,000 ಮಹಿಳೆಯರಿಗೆ ಕೃಷಿ ಕಾರ್ಯಗಳಲ್ಲಿ ತರಬೇತಿ ಕೊಡುವ ಯೋಜನೆಯೇ ಕೃಷಿ ಸಖಿ ಸ್ಕೀಮ್. ಕರ್ನಾಟಕ ಸೇರಿದಂತೆ 12 ಜಿಲ್ಲೆಗಳಿಂದ 34,000 ಮಹಿಳೆಯರಿಗೆ ಈ ಯೋಜನೆ ಅಡಿ ತರಬೇತಿ ನೀಡಿ ಪ್ರಮಾಣಪತ್ರ ಒದಗಿಸಲಾಗಿದೆ. ಸದ್ಯ 70,000 ಕೃಷಿ ಸಖಿಯರಿಗೆ ಗುರಿ ಇಡಲಾಗಿದೆ.
ಪಿಎಂ ಕಿಸಾನ್ ಯೋಜನೆ ಬಗ್ಗೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಜಮೀನು ಉಳುಮೆ ಮಾಡುವ ರೈತರಿಗೆ ಕೃಷಿ ಕಾರ್ಯಕ್ಕಾಗಿ ಧನಸಹಾಯ ಒದಗಿಸುವ ಉದ್ದೇಶ ಹೊಂದಿದೆ. ಈ ಸ್ಕೀಮ್ನಲ್ಲಿ ಕೇಂದ್ರ ಸರ್ಕಾರ ಸದ್ಯ ವರ್ಷಕ್ಕೆ ಆರು ಸಾವಿರ ರೂ ನೀಡುತ್ತದೆ. ತಲಾ 2,000 ರೂನಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಈ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. 2019ರಲ್ಲಿ ಈ ಯೋಜನೆ ಆರಂಭವಾಗಿದ್ದು ಈವರೆಗೂ 16 ಕಂತುಗಳನ್ನು ಸರ್ಕಾರ ನೀಡಿದೆ. ಜೂನ್ 18ರಂದು 17ನೇ ಕಂತಿನ ಹಣ ಬಿಡುಗಡೆ ಆಗುತ್ತದೆ.