ಮೈಸೂರು: ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಸರ್ಕಾರ ಎಫ್ಐಅರ್ ದಾಖಲಿಸಿ ಅವರ ಯಾತ್ರೆಗೆ ಅಡಚಣೆ ಉಂಟು ಮಾಡುತ್ತಿದೆ ಅಂತ ಖಂಡಿಸಿದರು. ವ್ಯಕ್ತಿಯೊಬ್ಬ ತಪ್ಪು ಮಾಡಿದಾಗ, ಭಾರತೀಯ ನ್ಯಾಯ ಸಂಹಿತೆಯನ್ನು ಉಲ್ಲಂಘಿಸಿದಾಗ ಅಥವಾ ಭಾರತದ ಸಂವಿಧಾನವನ್ನು ಉಲ್ಲಂಘಿಸಿದಾಗ ಎಫ್ಐಅರ್ ದಾಖಲಿಸುತ್ತಾರೆ ಎಂದು ಹೇಳಿದ ಸಿದ್ದರಾಮಯ್ಯ, ಯಾವುದೇ ಪ್ರಮಾದವೆಸಗದ ರಾಹುಲ್ ಗಾಂಧಿಯವರ ವಿರುದ್ಧ ಅಸ್ಸಾಂ ಸರ್ಕಾರ ವಿನಾಕಾರಣ ಮತ್ತು ಉದ್ದೇಶಪೂರ್ವಕವಾಗಿ ಎಫ್ಐಅರ್ ದಾಖಲಿಸಿದೆ ಎಂದರು. ರಾಹುಲ್ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ತಡೆಯಬೇಕು ಅದಕ್ಕೆ ಅಡ್ಡಿಯನ್ನುಂಟು ಮಾಡಬೇಕು ಎಂಬ ದುರುದ್ದೇಶದಿಂದ ಅಲ್ಲಿನ ಸರ್ಕಾರ ಇಂಥ ಕೆಲಸಗಳನ್ನು ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ ರಾಹುಲ್ ಗಾಂಧಿ ಇದನ್ನೆಲ್ಲ ಕೇರ್ ಮಾಡಲ್ಲ, ಅಸ್ಸಾಂ ಸರ್ಕಾರದ ಕ್ರಮ ತಿರುಗುಬಾಣವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.