ಮೈಸೂರು: ದೆಹಲಿ ಚಲೋಗೆ ಹೊರಟಿದ್ದ ರೈತರ ಬಂಧನ ಖಂಡನೀಯ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಭಟನೆ ಮಾಡಲು ದೆಹಲಿಗೆ ರೈತರು ತೆರಳದ ರೀತಿಯಲ್ಲಿ ದೆಹಲಿ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ರೈತರನ್ನು ಎದುರು ಹಾಕಿಕೊಂಡು ಯಾವೊಂದು ಸರ್ಕಾರ ಹೆಚ್ಚು ಕಾಲ ಉಳಿದಿಲ್ಲ. ಕೇಂದ್ರ ಸರ್ಕಾರದ ಈ ದಬ್ಬಾಳಿಕೆಯನ್ನು ನಾವು ಖಂಡಿಸುತ್ತೇವೆ. ಸತತ 383 ದಿನದ ಹೋರಾಟಕ್ಕೆ ಅಂದು ಕೇಂದ್ರ ಸರ್ಕಾರ ಮಣಿದು ರೈತ ವಿರೋಧಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಿತ್ತು. ಈಗ ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ನಡೆದುಕೊಂಡಿಲ್ಲ. ಸಮಸ್ಯೆ ಬಗೆಹರಿಸಲು ಸರ್ಕಾರ ಕಾಲಾವಕಾಶ ಕೇಳಬೇಕಿತ್ತು. ಅದನ್ನ ಬಿಟ್ಟು ರೈತರ ಹೋರಾಟ ಹತ್ತಿಕ್ಕಲು ಮುಂದಾಗಿದೆ. ಕೂಡಲೇ ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.