ಬೆಂಗಳೂರು: ಶಾಂತವಾಗಿದ್ದ ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಪ್ರಯತ್ನದಲ್ಲಿವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿಂದು ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಜನ ಶಾಂತಿ-ಸೌಹಾರ್ದತೆಗಳಿಂದ ಬದುಕುತ್ತಿದ್ದರು. ಆದರೆ ಈಗ ಈ ಪ್ರಾಂತ್ಯದಲ್ಲೂ ಅವರು ಕಾನೂನು ಮತ್ತು ಸುವ್ಯವಸ್ಥೆ ಕದಡುವ ಹುನ್ನಾರದಲ್ಲಿದ್ದಾರೆ. ಈ ಪ್ರಾಂತ್ಯದ ಎಲ್ಲ ಗ್ರಾಮಗಳ ನಿವಾಸಿಗಳಲ್ಲಿ ಪರಸ್ಪರ ಭ್ರಾತೃತ್ವದ ಭಾವನೆಗಳಿವೆ, ಊರಹಬ್ಬಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಸಂಭ್ರಮದಿಂದ ಆಚರಿಸುತ್ತಾರೆ, ಅವರ ನಡುವಿನ ಸೌಹಾರ್ದತೆ ಹಾಳು ಮಾಡುವ ಹೊಸ ಪ್ರಯೋಗವನ್ನು ಬಿಜೆಪಿ ನಾಯಕರು ಜಾರಿಗೆ ತಂದಿದ್ದಾರೆ. ಪಂಚಾಯಿತಿಯು ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಮಾತ್ರ ಹಾರಿಸಬೇಕೆಂದು ಹೇಳಿದ್ದರೂ ಹನುಮ ಧ್ವಜ ಹಾರಿಸಿದ್ದಾರೆ. ಬಿಜೆಪಿ ನಾಯಕರೇ ಅಲ್ವಾ, ಘರ್ ಘರ್ ತಿರಂಗಾ ಅಂತ ಘೋಷಣೆ ಸಾರಿದ್ದು, ಎಲ್ಲಿ ಹೋಯಿತು ಆ ಘೋಷಣೆ? ಅವರು ರಾಷ್ಟ್ರಧ್ವಜವನ್ನು ಬಿಟ್ಟು ಹನುಮ ಧ್ವಜವನ್ನೇ ಹಾರಿಸಿಕೊಂಡಿರಲಿ ಎಂದು ಕಿಡಿಕಾರಿದರು.