2021ರ ಮೇ 2ರಂದು ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಸುಮಾರು 24ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಕೋವಿಡ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಐಸಿಯುನಲ್ಲಿ ಇದ್ದ ರೋಗಿಗಳು ಆಕ್ಸಿಜನ್ ಇಲ್ಲದೆ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಘಟನೆ ನಡೆದು ಮೂರು ವರ್ಷ ಕಳೆದರೂ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರಗಳು ಬದಲಾದರೂ ಸಂತ್ರಸ್ತರ ಕಣ್ಣೀರೊರೆಸುವ ಕೈಗಳು ಮುಂದೆ ಬಂದಿಲ್ಲ. ಹೀಗಾಗಿ ಪರಿಹಾರ ಸಿಗದೆ ಹೋದ್ರೆ ನಮ್ಮ ಸಾವಿಗೆ ನೀವು ಕಾರಣ ಆಗ್ಬೇಡಿ ಎಂದು ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.
ಹೋದ ಸರ್ಕಾರ ನಮ್ಮ ಗಂಡಂದಿರ ಸಾವಿಗೆ ಕಾರಣ ಆಯ್ತು, ಈ ಸರ್ಕಾರ ನಮ್ಮ ಸಾವಿಗೆ ಕಾರಣ ಆಗೋದು ಬೇಡ ಎಂದು ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಆಕ್ಸಿಜನ್ ದುರಂತ ಸಂಭವಿಸಿ ಮೂರು ವರ್ಷ ಕಳೆದರೂ ಸಂತ್ರಸ್ತರ ಕುಟುಂಬಸ್ಥರಿಗೆ ನ್ಯಾಯ ಸಿಕ್ಕಿಲ್ಲ. ಇತ್ತ ಸೂಕ್ತ ಪರಿಹಾರ, ಸರ್ಕಾರಿ ನೌಕರಿ ಕೂಡ ಸಿಕ್ಕಿಲ್ಲ. ಸಂತ್ರಸ್ತ ಕುಟುಂಬಸ್ಥರ ಜೀವನ ಅಡ್ಡಕತ್ತರಿಗೆ ಸಿಲುಕಿದಂತಾಗಿದೆ. ಕಚೇರಿಗೆ ತಿರುಗಿ ತಿರುಗಿ ಜನಪ್ರತಿನಿಧಿಗಳ ಮನೆ ಸುತ್ತಿ ಚಪ್ಪಲಿ ಸವಿತೇ ಹೊರತೆ ನ್ಯಾಯ ಮಾತ್ರ ಇನ್ನೂ ಸಿಕ್ಕಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.