ಮೈಸೂರು : ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸಲು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಮೂರು ದಿನಗಳ ಮೈಸೂರು ಪ್ರವಾಸದಲ್ಲಿದ್ದಾರೆ. ಇದೇ ವೇಳೆ, ಮೈಸೂರಿನ ರೆಸಾರ್ಟ್ನಲ್ಲಿ ಕುಳಿತುಕೊಂಡೇ ‘ಆಪರೇಷನ್ ಹಸ್ತ’ಕ್ಕೆ ಮುಂದಾಗಿದ್ದಾರೆ. ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಆಪ್ತರಿಗೆ ಸಿಎಂ ಸಿದ್ದರಾಮಯ್ಯ ಗಾಳ ಹಾಕಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಆಪ್ತ ಹೆಚ್ವಿ ರಾಜೀವ್ ನಂತರ ಮತ್ತೊಬ್ಬ ಆಪ್ತನಿಗೆ ಸಿದ್ದರಾಮಯ್ಯ ಗಾಳ ಹಾಕಿದ್ದಾರೆ. ವರುಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಬೆನ್ನಿಗೆ ನಿಂತಿದ್ದ ಸದಾನಂದರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಸಿದ್ದರಾಮಯ್ಯ ಬಹುತೇಕ ಯಶಸ್ವಿಯಾಗಿದ್ದಾರೆ. ಸದಾನಂದ ವೀರಶೈವ ಸಮುದಾಯದ ಮುಖಂಡ ಸಹ ಆಗಿದ್ದು, ಅವರನ್ನು ಸೆಳೆಯುವ ಮೂಲಕ ವೀರಶೈವ ಮತಗಳ ಕ್ರೂಡೀಕರಣಕ್ಕೂ ಸಿದ್ದರಾಮಯ್ಯ ಯೋಜನೆ ರೂಪಿಸಿದ್ದಾರೆ.