ಚಿಕ್ಕಮಗಳೂರು : ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳು ಜೆಡಿಎಸ್ ತೆಕ್ಕೆಗೆ ಬಿದ್ದಿವೆ. ಈ ಪೈಕಿ ಪ್ರತಿಷ್ಠೆಯ ಕಣವಾಗಿರುವ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ದಳಪತಿ ಹೆಚ್ ಡಿ ದೇವೇಗೌಡ ಅವರು ಕಡೂರಿನಲ್ಲಿ ರಣತಂತ್ರ ರೂಪಿಸುತ್ತಿದ್ದಾರೆ. ಹಾಸನದ ಗೆಲುವಿಗೆ ಕಡೂರು ಜೆಡಿಎಸ್ ಪಾಲಿಗೆ ನಿರ್ಣಾಯಕವಾಗಿದೆ. ಕಡೂರಿನಲ್ಲಿ ದೇವೇಗೌಡ ಅವರು ಸಂಧಾನ ಸೂತ್ರ ಅನುರಿಸುತ್ತಿದ್ದಾರೆ. ಕಡೂರು ಬಿಜೆಪಿ ಮಾಜಿ ಶಾಸಕ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೆಂಪರಾಜು ಪುತ್ರ, ತರೀಕೆರೆ ಕಾಂಗ್ರೆಸ್ ಶಾಸಕ ಶ್ರೀನಿವಾಸ ಅಳಿಯ ಚೇತನ್ ಕೆಂಪರಾಜು ಅವರು ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಈ ಸಂಬಂಧ ದೇವೇಗೌಡ ಅವರು ಚೇತನ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಮಾಜಿ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಮನೆಗೂ ತೆರಳಿ ಸಂಧಾನ ಸಭೆ ನಡೆಸಿದ್ದಾರೆ.