ಮೈಸೂರು: ಇಂದಿನಿಂದ ಸುತ್ತೂರು ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಫೆಬ್ರವರಿ 11ರವರೆಗೆ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳ ಅನಾವರಣಗೊಳ್ಳಲಿದ್ದು, ಇಂದು ಕೊಂಡೋತ್ಸವ, 7ರಂದು ಹಾಲರವಿ ಉತ್ಸವ, 8ರಂದು ರಥೋತ್ಸವ, 9ರಂದು ಲಕ್ಷ ದೀಪೋತ್ಸವ, 10ರಂದು ತೆಪ್ಪೋತ್ಸವ, 11ರಂದು ಅನ್ನ ಬ್ರಹ್ಮೋತ್ಸವ ನಡೆಯಲಿದೆ.ಇಂದು ಸಂಜೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗಲಿದ್ದು, ಭಜನೆ, ರಂಗೋಲಿ, ಚಿತ್ರಕಲೆ, ಗಾಳಿಪಟ, ಚಿತ್ರಸಂತೆ, ಕುಸ್ತಿ, ದನಗಳ ಜಾತ್ರೆ, ಕಪಿಲಾರತಿ, ದೋಣಿ ವಿಹಾರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ಜೊತೆಗೆ ಜಾತ್ರೆಗೆ ಬರುವ ಬರೋಬ್ಬರಿ 25 ಲಕ್ಷ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ.