ಮೈಸೂರು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ನಂಜುಂಡೇಶ್ವರ ದೊಡ್ಡ ಜಾತ್ರಾ ಮಹೋತ್ಸವ ಶುರುವಾಗಿದೆ. 108 ಅಡಿ ಎತ್ತರದ ಗೌತಮ ಪಂಚ ಮಹಾರಥ ರಾಜ ಬೀದಿಯಲ್ಲಿ ಸಾಗಿದೆ. ಬೆಳಗ್ಗೆ 6.30 ರಿಂದ 6.50 ರ ಶುಭ ಮೀನ ಲಗ್ನದಲ್ಲಿ ಜರುಗಿದ ರಥೋತ್ಸವದಲ್ಲಿ ರಾಜ್ಯ, ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸಿ ರಾಥೋತ್ಸವಕ್ಕೆ ಸಾಕ್ಷಿಯಾದರು. ಇನ್ನು ದೇವಾಲಯದ ಪ್ರಧಾನ ಆಗಮಿಕ ನೀಲಕಂಠ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಪುನಸ್ಕಾರ ನೆರವೇರಿದ್ದು, ಹೂವುಗಳು, ಬಣ್ಣ ಬಣ್ಣದ ಬಟ್ಟೆಯಿಂದ ಮದುವಣಗಿತ್ತಿಯಂತೆ ರಥ ಸಿಂಗಾರಗೊಂಡಿತ್ತು. ದೇವಾಲಯದ ಸುತ್ತ ರಾಜ ಬೀದಿಯಲ್ಲಿ ರಥ ಸಂಚರಿಸಿದ್ದು ರಥೋತ್ಸವನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾದರು. ಇನ್ನು ರಥೋತ್ಸವದಲ್ಲಿ ಐದು ರಥಗಳನ್ನು ಎಳೆಯುವುದು ದೊಡ್ಡ ಜಾತ್ರೆಯ ವಿಶೇಷ. ಇದನ್ನು ಗೌತಮ ಮಹರ್ಷಿಗಳು ಮೊದಲು ಎಳೆದಿದ್ದರು ಎನ್ನುವ ಐತಿಹ್ಯ ಇರುವ ಕಾರಣ ಈಗಲೂ ಈ ರಥಕ್ಕೆ ಗೌತಮ ಪಂಚ ರಥ ಎಂದೇ ಕರೆಯಲಾಗುತ್ತೆ.