ಮಂಡ್ಯ: ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಬಳಿಕ ನಡೆದ ಪೊಲೀಸರ ಲಾಠಿಚಾರ್ಜ್ ನಲ್ಲಿ ಗಾಯಗೊಂಡವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ಇಂದು ಬೆಳಗ್ಗೆ ಮಾತಾಡಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಇಂದ್ರೇಶ್, ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತರೂಢ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆಯೇ ಹೊರತು ಬಿಜೆಪಿ ಅಲ್ಲ ಎಂದು ಹೇಳಿದರು. ಕೆರೆಗೋಡು ಗ್ರಾಮಸ್ಥರಿಗೆ ಗಲಾಟೆ ಮಾಡಿ ಅಂತ ಬಿಜೆಪಿ ಹೇಳಿತ್ತಾ ಎಂದು ಪ್ರಶ್ನಿಸಿದ ಅವರು ಹೊರಗಿನಿಂದ ಜನರನ್ನು ಕರೆತರಲಾಗಿತ್ತು ಅಂತ ಸರ್ಕಾರ ಹೇಳುತ್ತಿರುವುದರಲ್ಲಿ ಹುರುಳಿಲ್ಲ, ಹೊರಗಡೆಯಿಂದ ಯಾರೂ ಬಂದಿಲ್ಲ, ಪೊಲೀಸರಿಂದ ಲಾಠಿ ಏಟು ತಿಂದವರೆಲ್ಲ ಸ್ಥಳೀಯರು. ಅಪ್ರಾಪ್ತ ಬಾಲಕನೊಬ್ಬನನ್ನು ಪೊಲೀಸರು ವಿಚಾರಣೆ ನಡೆಸಿದ್ದು ಅವನ ತಂದೆತಾಯಿಗಳು ಭಯಭೀತರಾಗಿದ್ದಾರೆ, ಎಲ್ಲ ಗ್ರಾಮಸ್ಥರ ಮನೆಗಳಿಗೆ ತೆರಳಿ ಅವರನ್ನು ಹೆದರಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ, ಆದರೆ ಅವರ ಬೆದರಿಕೆಗಳಿಗೆ ಯಾರೂ ಹೆದರಲ್ಲ, ಊರವರೆಲ್ಲ ತಮ್ಮ ತಮ್ಮ ಮನೆಗಳ ಮೇಲೆ ಹನುಮ ಧ್ವಜ ಹಾರಿಸುವ ತಯಾರಿ ನಡೆಸಿದ್ದಾರೆ, ತಾಕತ್ತಿದ್ದರೆ ಅವರನ್ನು ತಡೆಯಲಿ ಎಂದು ಇಂದ್ರೇಶ್ ಸರ್ಕಾರಕ್ಕೆ ಸವಾಲೆಸೆದರು.