ಹಾಸನ : ಹಾಸನ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ದಿಢೀರ್ ಸ್ಥಗಿತಗೊಂಡಿದೆ. ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಿಲ್ಲಿಸಿ ಸದ್ದಿಲ್ಲದೆ ಸಾಕಾನೆಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ಜನವರಿ 4ರಂದು ಬೇಲೂರು ತಾಲ್ಲೂಕಿನ ಮತ್ತಾವರ ಬಳಿ ಕಾರ್ಮಿಕರೊಬ್ಬರನ್ನು ಕಾಡಾನೆ ಕೊಂದುಹಾಕಿತ್ತು. ಇದಾದ ನಂತರ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿತ್ತು. ಸ್ಥಳೀಯರಿಂದ ವ್ಯಾಪಕ ಆಗ್ರಹ ವ್ಯಕ್ತವಾದ ಬೆನ್ನಲ್ಲೇ ಅರಣ್ಯ ಇಲಾಖೆ ಇತ್ತೀಚೆಗೆ ಮತ್ತೆ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಿತ್ತು.
ಎರಡು ಕಾಡಾನೆಗಳನ್ನು ಇತ್ತೀಚೆಗೆ ಸೆರೆಹಿಡಿಲಾಗಿತ್ತು. ಆದರೆ, ಹಂತಕ ಆನೆಗಳ ಪೈಕಿ ಯಾವುದನ್ನೂ ಸೆರೆ ಹಿಡಿಯದೆ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದು ಇದೀಗ ಮತ್ತೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಕಾರ್ಮಿಕ ವಸಂತ್ ಬಲಿ ಪಡೆದಿದ್ದ ಸೀಗೆ ಹೆಸರಿನ ಕಾಡಾನೆ, ಈ ಆನೆ ಜೊತೆಗೆ ಶಾರ್ಪ್ ಶೂಟರ್ ವೆಂಕಟೇಶ ಬಲಿ ಪಡೆದ ಭೀಮಾ ಹಾಗು ದಸರಾ ಆನೆ ಅರ್ಜುನನನ್ನು ಕೊಂದ ಆನೆಗಳ ಸೆರೆಗೆ ಜನ ಒತ್ತಾಯಿಸಿದ್ದರು. ಆದರೆ, ಈ ಯಾವುದೇ ಆನೆಗಳನ್ನು ಸೆರೆ ಹಿಡಿಯದೆ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಅಧಿಕಾರಿಗಳು ಸಾಕಾನೆಗಳನ್ನು ವಾಪಸ್ ಕಳುಹಿಸಿದ್ದಾರೆ.