ಮಂಡ್ಯ: ನಾನು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಅಖಾಡದಿಂದ ಹಿಂದೆ ಸರಿದಿದ್ದಾರೆ. ಹಾಗಿದ್ರೆ ಮಂಡ್ಯ ಕ್ಷೇತ್ರದಿಂದ ಮೈತ್ರಿಯ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಎದ್ದಿದೆ. ಅಭ್ಯರ್ಥಿ ಆಯ್ಕೆ ಮತ್ತೆ ದಳಪತಿಗಳಿಗೆ ಗೊಂದಲವಾಗಿದೆ. ಮಂಡ್ಯ ಲೋಕಸಭಾ ಅಖಾಡದಿಂದ ನಿಖಿಲ್ ಹಿಂದೆ ಸರಿದ ಹಿನ್ನಲೆ ಇದೀಗ ಹೆಚ್ಡಿ ಕುಮಾರಸ್ವಾಮಿ ಅವರ ಬಳಿಗೆ ನಾಯಕರು ಹೋಗಲಿದ್ದಾರೆ. ಕುಮಾರಸ್ವಾಮಿ ಅವರೇ ಅಭ್ಯರ್ಥಿ ಆಗಬೇಕೆಂದು ದಳಪತಿಗಳು ಒತ್ತಡ ಹಾಕಲಿದ್ದಾರೆ. ನೀವು ಬನ್ನಿ ಇಲ್ಲ ನಿಖಿಲ್ ಮನವೊಲಿಸಿ ಎಂದು ಕುಮಾರಸ್ವಾಮಿಗೆ ಮನವಿ ಮಾಡಲಿದ್ದಾರೆ. ಮಂಡ್ಯದಿಂದ ಮಾಜಿ ಸಚಿವರಾದ ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಸುರೇಶ್ಗೌಡ ಟಿಕೆಟ್ ಆಕಾಂಕ್ಷಿತರು. ಮೂವರಲ್ಲಿ ಒಬ್ಬರು ಸ್ಪರ್ಧೆ ಮಾಡಿ ನಾವು ಇರ್ತೀವಿ ಎಂದು ಕುಮಾರಸ್ವಾಮಿ ಅವರು ಹೇಳುವ ಸಾಧ್ಯತೆ ಇದೆ. ಇಲ್ಲ ನಿಖಿಲ್ ಮನವೊಲಿಸಲು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಅಥವಾ ತಾವೇ ಮಂಡ್ಯ ಅಖಾಡಕ್ಕೆ ಪ್ರವೇಶ ಮಾಡ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.