ಮಂಡ್ಯ : ಲೋಕಸಭಾ ಸಮರಕ್ಕೆ ಮಹೂರ್ತ ಫಿಕ್ಸ್ ಆಗಿದೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯ ಮಾಜಿ ಸಿಎಂ ಕುಮಾರಸ್ವಾಮಿ ಸ್ವರ್ಧೆಯಿಂದ ಹೈ ವೋಲ್ಟೇಜ್ ಕದನವಾಗಿದೆ ಮಾರ್ಪಟ್ಟಿದೆ. ಆದರೆ, ಬಿಜೆಪಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಸುಮಲತಾ ನಡೆ ಇನ್ನೂ ನಿಗೂಢವಾಗಿದೆ. ಮಂಡ್ಯದಲ್ಲೆ ಸುಮಲತಾರ ಮುಂದಿನ ರಾಜಕೀಯ ನಡೆ ನಿರ್ಧಾರವಾಗಲಿದ್ದು, ಏಪ್ರಿಲ್ 3 ರಂದು ತನ್ನ ಅಂತಿಮ ನಿರ್ಧಾರ ಪ್ರಕಟ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಆಪ್ತರು, ಬೆಂಬಲಿಗರ ಒತ್ತಾಯ ಮಾಡುತ್ತಿದ್ದಾರೆ. ಇತ್ತ ಸುಮಲತಾ ಕೂಡ ಮಂಡ್ಯ ಬಿಡಲ್ಲ, ಮಂಡ್ಯ ಮಣ್ಣಿನ ಋಣ ಮರೆಯಲ್ಲ ಎಂದು ಜನರಿಗೆ ಹೇಳಿದ್ದಾರೆ. ಆದರೆ, ಮತ್ತೊಂದೆಡೆ ಮೈತ್ರಿ ಬೆಂಬಲಿಸಿ, ಪಕ್ಷ ನಿಮ್ಮ ಜೊತೆ ಇರಲಿದೆ. ಸೂಕ್ತ ಸ್ಥಾನಮಾನದ ಭರವಸೆಯನ್ನ ಕೂಡ ನೀಡುವುದಾಗಿ ಬಿಜೆಪಿ ಹೈಕಮಾಂಡ್ ಹೇಳುತ್ತಿದೆ. ಹೀಗಾಗಿ ಸದ್ಯ ತ್ರಿಶಂಕು ಸ್ಥಿತಿಗೆ ತಲುಪಿದ್ದು, ಬುಧವಾರ ಮಂಡ್ಯದಲ್ಲಿಯೇ ತಮ್ಮ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಘೋಷಣೆ ಮಾಡಿದ್ದಾರೆ.
ಇನ್ನು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮತಬೇಟೆ ಮುಂದುವರೆದಿದ್ದು, ಅಪ್ಪನ ಪರವಾಗಿ ಮಗನ ಪ್ರಚಾರ ಮುಂದುವರೆಸಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರೊಂದಿಗೆ ನಿಖಿಲ್ ಪ್ರಚಾರ ಮಾಡಿದರು. ಮಂಡ್ಯದ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಕೂಡ ಶ್ರೀರಂಗಪಟ್ಟಣದಲ್ಲಿ ಕಾರ್ಯಕರ್ತರ ಸಮನ್ವಯ ಸಭೆ ನಡೆಸಿದರು. ಸಭೆಯಲ್ಲಿ ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸಿ.ಎಸ್.ಪುಟ್ಟರಾಜು, ಸುರೇಶ್ ಗೌಡ, ಕೆಸಿ ನಾರಾಯಣ್ ಗೌಡ , ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದರು.