ಮೈಸೂರು: ಸಿಎಂ ತವರಲ್ಲೇ ಕಾಂಗ್ರೆಸ್ಗೆ ಹೀನಾಯ ಸ್ಥಿತಿ ನಿರ್ಮಾಣವಾಗಿದ್ದು, ಚುನಾವಣೆ ಘೋಷಣೆ ಸಮೀಪಿಸಿದರೂ ಇನ್ನೂ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಅಭ್ಯರ್ಥಿಯೇ ಸಿಕ್ಕಿಲ್ಲ. ಅಭ್ಯರ್ಥಿ ಹುಡುಕಾಟದಲ್ಲೇ ನಾಯಕರು, ಮುಖಂಡರಲ್ಲಿ ಟೆನ್ಷನ್ ಮುಂದುವರಿದಿದೆ. ಖುದ್ದು ಸಿಎಂ ತಲಾಶ್ ನಡೆಸಿದರೂ ಕೈ ಅಭ್ಯರ್ಥಿ ಯಾರೆಂದು ಫೈನಲ್ ಆಗಿಲ್ಲ. ಶುಕ್ರವಾರ ಇಡೀ ದಿನ ಮೈಸೂರು ನಿವಾಸದಲ್ಲಿ ಬಿಸಿ ಬಿಸಿ ಚರ್ಚೆಯಾಗಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿದರೂ ಸಮರ್ಥ ಅಭ್ಯರ್ಥಿ ಸಿಗದೆ ಸಿಎಂ ಕೂಡ ಟೆನ್ಷನ್ನಲ್ಲಿರುವಂತೆ ಆಗಿದೆ. ಶತಾಯಗತಾಯ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಸಿಎಂ ಸಿದ್ದರಾಮಯ್ಯ ಹಠ ತೊಟ್ಟಿದ್ಧಾರೆ. 8 ವಿಧಾನಸಭಾ ವ್ಯಾಪ್ತಿಯ ಕ್ಷೇತ್ರದಲ್ಲಿ 5 ಕ್ಷೇತ್ರದಲ್ಲಿ ಕೈ ಶಾಸಕರಿದ್ಧಾರೆ. ಮಡಿಕೇರಿಯಲ್ಲಿ ಎರಡು, ಪಿರಿಯಾಪಟ್ಟಣ, ನರಸಿಂಹರಾಜ, ಚಾಮರಾಜ ಕ್ಷೇತ್ರದಲ್ಲಿ ಕೈ ಶಾಸಕರಿದ್ದಾರೆ. ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಇನ್ನು ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಗೆಲ್ಲುವ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ಮುಂದುವರೆದಿದ್ದು, 15 ಕ್ಕೂ ಹೆಚ್ಚು ಆಕಾಂಕ್ಷಿಗಳ ಪಟ್ಟಿ ಇದ್ದರೂ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಾಗಿ ಶೋಧ ನಡೆಸಲಾಗಿದೆ. ನಿನ್ನೆ ಮುಖಂಡರ ಜತೆ ಸಿಎಂ ಚರ್ಚಿಸಿದರೂ ಇನ್ನು ಗೊಂದಲ ಬಗೆಹರಿದಿಲ್ಲ. ಬಿಜೆಪಿ ಅಭ್ಯರ್ಥಿ ಯದುವೀರ್ ಗೆ ಪೈಪೋಟಿ ನೀಡುವವರು ಯಾರೆಂಬ ಚರ್ಚೆ ನಡೆಯುತ್ತಲೇ ಇದೆ.