ಬೆಂಗಳೂರು: ಅಥಣಿ ಶಾಸಕ ಲಕ್ಷ್ಮಣ ಸವದಿ ಕಾಂಗ್ರೆಸ್ ತೊರೆದು ಪುನಃ ಬಿಜೆಪಿಗೆ ವಾಪಸ್ಸು ಹೋಗುವ ಊಹಾಪೋಹಗಳನ್ನು ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ತಳ್ಳಿ ಹಾಕಿದರು. ನಗರದಲ್ಲಿಂದು ಮಾತಾಡಿದ ಸಚಿವ, ಸವದಿ ಪಕ್ಷ ಬಿಡುತ್ತಾರೆಂದು ಸುಖಾಸುಮ್ಮನೆ ವದಂತಿಗಳನ್ನು ಹಬ್ಬಿಸಲಾಗುತ್ತಿದೆ, ಬೆಳಗಾವಿ ಡಿಸಿಸಿ ಬ್ಯಾಂಕ್ ಸಂಬಂಧಿಸಿದಂತೆ ಹೇಳುವುದಾದರೆ, ಲಕ್ಷ್ಮಣ ಸವದಿ ಸೇರಿದಂತೆ, ರಮೇಶ್ ಜಾರಕಿಹೊಳಿ, ಪ್ರಕಾಶ್ ಹುಕ್ಕೇರಿ, ರಮೇಶ್ ಕತ್ತಿ-ಎಲ್ಲರೂ ಅದರ ಸದಸ್ಯರು. ಅವರೆಲ್ಲ ಒಟ್ಟಾಗಿ ಒಂದೆಡೆ ಕೂತು ಮಾತಾಡಿದರೆ, ಅದಕ್ಕೆ ವಿಪರೀತ ಅರ್ಥ ಕಲ್ಪಿಸಿ ಸವದಿ ಬಿಜೆಪಿ ಸೇರುತ್ತಿದ್ದಾರೆ ಅಂತಲ್ಲ ಎಂದು ಪಾಟೀಲ್ ಹೇಳಿದರು. ಸವದಿ ಒಬ್ಬ ಹಿರಿಯ ನಾಯಕರು ಮತ್ತು ಹಿಂದೆ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ 75,000ಕ್ಕೂ ಅಧಿಕ ಬಹುಮತದಿಂದ ಗೆದ್ದು ತಮ್ಮ ಸಾಮರ್ಥ್ಯ ಏನು ಅನ್ನೋದನ್ನು ತೋರಿದವರು, ಅವರು ಕಾಂಗ್ರೆಸ್ ತೊರೆಯುವ ಪ್ರಶ್ನೆ ಯಾವತ್ತೂ ಉಧ್ಭವಿಸಲ್ಲ ಎಂದು ಪಾಟೀಲ್ ಹೇಳಿದರು.