ಮೈಸೂರು: ಮುಡಾಗೆ ಸಿಎಂ ಪತ್ನಿ ಸೈಟ್ ವಾಪಸ್ ಕೊಟ್ಟ ವಿಚಾರ ಸಂಬಂಧ ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ರಾಜಕಾರಣಿಗಳೇ ನಿಮ್ಮ ಹೆಂಡತಿ, ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ. ಪಾರ್ವತಮ್ಮ ಅವರಿಗೆ ತಮ್ಮ ಪತಿಯ ತಪ್ಪಸ್ಸಿನ ರಾಜಕಾರಣಕ್ಕಿಂತ, ಸೈಟ್ ಮುಖ್ಯವಾಗಿತ್ತು ಹೀಗಾಗಿಯೇ ಇಷ್ಟು ದಿನ ಹಠ ಹಿಡಿದು ಕೂತಿದ್ದು ಎಂದಿರುವ ಅವರು, ಸೈಟ್ ವಾಪಸ್ ಕೊಡುವುದಾಗಿದ್ದರೆ
ಹೈಕೋರ್ಟ್ ನಲ್ಲಿ ಯಾಕೆ ಈ ಬಗ್ಗೆ ಫೈಟ್ ಮಾಡಿದ್ರೀ? ಎಂದು ಪ್ರಶ್ನಿಸಿದ್ದಾರೆ.
ಎರಡೂವರೆ ತಿಂಗಳ ಹಿಂದೆಯೇ ನಾನು ಸಿಎಂಗೆ ನಿಮಗೆ ಬಂದಿರುವ ಅಕ್ರಮ ಸೈಟ್ ವಾಪಸ್ ಕೊಟ್ಟು ಬಿಡಿ ಎಂದು ಹೇಳಿದ್ದೆ. ಸಿಎಂ ಅವರ ಇಷ್ಟು ವರ್ಷದ ರಾಜಕೀಯ ಜೀವನವನ್ನು 14 ಸೈಟ್ ನುಂಗಬಾರದು ಎಂದು ಅವತ್ತೇ ಹೇಳಿದ್ದೆ. ಎರಡೂವರೆ ತಿಂಗಳ ಹಿಂದೆಯೇ ವಾಪಸ್ ಕೊಟ್ಟಿದ್ದರೆ ಇವತ್ತು ಪ್ರಾಸಿಕ್ಯೂಷನ್, ಕೇಸ್ ಏನೂ ಆಗುತ್ತಿರಲಿಲ್ಲ, ಸಿಎಂ ಕುರ್ಚಿಯೂ ಅಲುಗಾಡುತ್ತಿರಲಿಲ್ಲ. ಹೊಗಳು ಭಟ್ಟರು ಬಹುಪರಾಕ್ ಹಾಕುವವರನ್ನು ಇಟ್ಟುಕೊಂಡಿರುವ ಪರಿಣಾಮ ಸಿಎಂ ಗೆ ಈ ಸ್ಥಿತಿ ಬಂದಿದೆ. ಅಧಿಕಾರದಲ್ಲಿ ಇದ್ದಾಗ ಕುಟುಂಬವನ್ನು ಹತ್ತಿರವಿಟ್ಟು ಕೊಂಡರೆ, ಮಕ್ಕಳ ಬೆಳೆಸಲು ಮುಂದಾದರೆ ಅದೇ ಕುಟುಂಬ ನಿಮ್ಮ ಹೆಸರಿಗೆ ಕಳಂಕ ತರುತ್ತದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆಯಷ್ಟೆ ಎಂದರು.
ಒಡವೆ ಕದ್ದ ಕಳ್ಳ ಒಡವೆ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ? ಇಲ್ಲಾ ಅಲ್ವಾ? ಸಿಎಂ ತಮ್ಮ ಸೈಟ್ ಗೆ 64 ಕೋಟಿ ರೂಪಾಯಿ ಕೇಳಿದ ದಿನವೇ ಸಿಎಂ ಮೇಲಿನ ಗೌರವ, ವಿಶ್ವಾಸವೆಲ್ಲ ನೆಲ ಕಚ್ಚಿತು. ಈಗ ಸಿಎಂ ಪತ್ನಿ ಸೈಟ್ ವಾಪಸ್ ಕೊಟ್ಟರು ಅಷ್ಟೇ ಕೊಡದಿದ್ದರೂ ಅಷ್ಟೇ ತನಿಖೆ ಆಗಲೇಬೇಕು. ವರುಣ ಚುನಾವಣೆ ಸಂದರ್ಭದಲ್ಲೇ ನನಗೆ ಈ ಸೈಟ್ ದಾಖಲಾತಿ ಬಂದಿತ್ತು. ಸಿಎಂ ಪತ್ನಿ ಹೆಸರಿದೆ, ವೈಯುಕ್ತಿಕ ದಾಳಿ ಬೇಡ ಅಂತಾ ಸುಮ್ಮನಾದೆ ಎಂದರು. ರಾಜಕಾರಣಿಗಳೇ ನಿಮ್ಮ ಹೆಂಡತಿ, ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ ಈ ಹಿಂದೆ ಸಿಎಂ ಆಗಿದ್ದವರು ಜೈಲಿಗೆ ಹೋಗಿದ್ದು ಕೂಡ ಅವರ ಕುಟುಂಬದ, ಮಕ್ಕಳ ಕಾರಣಕ್ಕಾಗಿ ಎಂಬುದು ನೆನಪಿರಲಿ. ಈಗ ಸಿಎಂ ಪತ್ನಿಯ ಭಾವನಾತ್ಮಕ ಕಾರ್ಡ್ ವರ್ಕ್ ಆಗೋದಿಲ್ಲ. ಪಾರ್ವತಮ್ಮ ಅವರಿಗೆ ತಮ್ಮ ಪತಿಯ ತಪ್ಪಸ್ಸಿನ ರೀತಿಯ ರಾಜಕಾರಣಕ್ಕಿಂತ, ಸೈಟ್ ಮುಖ್ಯವಾಗಿ ಇಷ್ಟು ದಿನ ಹಠ ಹಿಡಿದು ಕೂತಿದ್ದೆ ಬಹುದೊಡ್ಡ ತಪ್ಪು ಎಂದು ಟಾಂಗ್ ನೀಡಿದ್ದಾರೆ.
ಇನ್ನು ಎಚ್ ಡಿ ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಎಡಿಜಿಪಿ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ರಾಜಕಾರಣಿಗಳಿಗಿಂತ ಅಧಿಕಾರಿಗಳೇ ಹೆಚ್ಚು ಭ್ರಷ್ಟರು. ಚಂದ್ರಶೇಖರ್ ಬಗ್ಗೆ ಕುಮಾರಸ್ವಾಮಿ ಅವರ ಬಳಿ ದಾಖಲೆ ಇರಬಹುದು ಅದಕ್ಕೆ ಆರೋಪ ಮಾಡಿದ್ದಾರೆ. ಅಧಿಕಾರಿ ಚಂದ್ರಶೇಖರ್ ಸತ್ಯಸಂಧನಾಗಿದ್ದರೆ, ಕುಮಾರಸ್ವಾಮಿ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿ ಎಂದಿದ್ದಾರೆ. ಚಂದ್ರಶೇಖರ್ ಕರ್ನಾಟಕ ಕೇಡರ್ ಅಧಿಕಾರಿ ಅಲ್ಲ, ಹಿಮಾಚಲಪ್ರದೇಶದ ಕೇಡರ್ ಅಧಿಕಾರಿ ನೀವು ಯಾಕೆ ಕರ್ನಾಟಕದಲ್ಲಿದ್ದೀರಾ? ಎಂದು ಪ್ರಶ್ನಿಸಿದ ಅವರು, ಚಂದ್ರಶೇಖರ್ ನೀವು ಈ ಕೂಡಲೇ ರಾಜ್ಯದಿಂದ ತೊಲಗಿ, ಗೆಟ್ ಲಾಸ್ಟ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಹಾಗೂ ಡಿಸಿಎಂ ಗೆ ಯಾವುದೇ ಅಧಿಕಾರಿ ಹಂದಿ ಎಂದು ಕರೆದಿದ್ದರೆ ಸುಮ್ಮನೆ ಇರುತ್ತಿದ್ದರಾ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿರುವ ಅವರು, ಚಂದ್ರಶೇಖರ್ ಮೊದಲು ಸಂಸ್ಪೆಡ್ ಆಗಬೇಕು. ಕನ್ನಡಿಗ ಕುಮಾರಸ್ವಾಮಿ ಮೇಲೆ ಏನೇನೋ ಮಾತಾಡಿದರೆ ಸುಮ್ಮನೆ ಬಿಡಲ್ಲ. ಮಿಸ್ಟರ್ ಚಂದ್ರಶೇಖರ್, ಭಾಷೆ ಮೇಲೆ ಹಿಡಿತ ಇರಲಿ ಹಂದಿಗಳು ಬೇಕಿದ್ರೆ ಆಂಧ್ರಕ್ಕೆ ಹೋಗಿ, ಅಲ್ಲೇ ಜಾಸ್ತಿ ಹಂದಿಗಳು ಇರೋದು. ಚಂದ್ರಶೇಖರ್ ನಿಮ್ಮ ಉದ್ದಟತನ ನಮ್ಮ ಬಳಿ ನಡೆಯೋಲ್ಲ, ಎಚ್ಚರಿಕೆ ಇರಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಎಡಿಜಿಪಿ ಚಂದ್ರಶೇಕರ್ ಗೆ ಎಚ್ಚರಿಕೆ ನೀಡಿದ್ದಾರೆ.