ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ವಾಗ್ದಾಳಿ
ಕಾಂಗ್ರೆಸ್ ಕಾರ್ಯಕರ್ತರ ಸಭೆ
ವಿವಿಧ ಮುಖಂಡರು ಭಾಗಿ
ಗುಂಡ್ಲುಪೇಟೆ : ಕೇಂದ್ರ ಸರ್ಕಾರದ ಆಡಳಿತ ಬಂಡವಾಳ ಶಾಹಿಗೆ ಅನುಕೂಲಕರವಾದ ರೀತಿಯಲ್ಲಿ ಇದೆ. ಬಡವರಿಗೆ ರೈತರಿಗೆ ಅನುಕೂಲವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಗುಂಡ್ಲುಪೇಟೆ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದರು.
ದೇಶದ ಮೂಲ ಕಸುಬು ಕೃಷಿ, ಆದರೆ ಬಿಜೆಪಿಯವರು ತಮ್ಮ ಹತ್ತು ವರ್ಷದ ಅವಧಿಯಲ್ಲಿ ದೇಶದ ಯಾವ ಭಾಗದಲ್ಲಿಯೂ ಒಂದು ಅಣೆಕಟ್ಟೆಯನ್ನು ನಿರ್ಮಾಣ ಮಾಡಲಿಲ್ಲ. ರೈತರ ಆದಾಯವನ್ನು ಹೆಚ್ಚಿಸುವುದಾಗಿ ಹೇಳಿದ್ದ ಬಿಜೆಪಿ ಭೂ ಶಾಸನ ಕಾಯಿದೆಯನ್ನು ರದ್ದು ಮಾಡಿತು. ಇವರಿಂದಾಗಿ ರೈತರ ಹಾಗೂ ಹಳ್ಳಿಯ ಬದುಕು ಕಂಗಾಲಾಗಿದೆ ಎಂದರು.
ಬಿಜೆಪಿ ಒಂದು ಸುಡುವ ಮನೆ, ಈಗಾಗಲೇ ರಾಜ್ಯದ ಮೈಸೂರು, ಚಾಮರಾಜನಗರ, ದಾವಣಗೆರೆ, ಕೋಲಾರ, ಶಿವಮೊಗ್ಗ, ಚಿಕ್ಕಮಂಗಳೂರು, ದಕ್ಷಿಣ ಬೆಂಗಳೂರು, ಕೊಪ್ಪಳ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗಾಗಿ ಪರಿತಪಿಸುತ್ತಿದ್ದು, ರೈತರ ದೇಶದ ಅಭಿವೃದ್ಧಿಯನ್ನು ಬದಿಗಿಟ್ಟು ಪ್ರಧಾನಿ ನರೇಂದ್ರ ಮೋದಿ ಬರಿ ಭಾಷಣಕ್ಕೆ ಸೀಮಿತವಾಗಿದ್ದಾರೆ. ಸರ್ವಾಧಿಕಾರವನ್ನೇ ಮುಂದಿಟ್ಟುಕೊಂಡು ರಾಜಕೀಯ ನಡೆಸುತ್ತಿರುವ ಬಿಜೆಪಿ ಪಕ್ಷವನ್ನು ಈ ಬಾರಿಯ ಚುನಾವಣೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ದೇಶದ ನಾಗರಿಕರು ಮತ ಚಲಾಯಿಸಬೇಕಾಗಿದೆ ಎಂದರು.
ದೇಶದ ರೈತರ ಅಭಿವೃದ್ಧಿಗಾಗಿ ದೇಶದ ಅಭಿವೃದ್ಧಿಗಾಗಿ ಪಣತೊಟ್ಟಿರುವ ಪಕ್ಷದ ಪರವಾಗಿ ಮತದಾರರು ಹಾಗೂ ಕೋಮುವಾದವನ್ನು ಅಳಿಸಲು ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಲು ಕಾಂಗ್ರೆಸ್ ಗೆಲ್ಲಬೇಕು. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಸುನಿಲ್ ಬೋಸ್ ಅವರನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಮಾತಿಗೆ ಕ್ಷೇತ್ರದ ಜನರು ಮರುಳಾಗಬೇಡಿ ಎಂದು ವರುಣ ಕ್ಷೇತ್ರದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್ ಪಕ್ಷ ಬಿಟ್ಟು ಹೋದ ಎಸ್.ಬಾಲರಾಜ್ ಮತ ಕೇಳಲು ಮುಂದಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ವಿದೇಶದಲ್ಲಿರುವ ಕಪ್ಪು ಹಣ ತಂದು ಒಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ, 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಇನ್ನಿತರ ಸುಳ್ಳು ಹೇಳಿ ಅಧಿಕಾರ ಹಿಡಿದರು. ಇಲ್ಲಿ ತನಕ ಇದ್ಯಾವುದು ಈಡೇರಿಲ್ಲ. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೆ ಕೊಟ್ಟ 165 ಭರವಸೆಯಲ್ಲಿ 158 ಭರವಸೆ ಈಡೇರಿಸಿದೆ. ಇದೀಗ 5 ಗ್ಯಾರಂಟಿಯನ್ನು ಜಾರಿ ಮಾಡಿದೆ. ನುಡಿದಂತೆ ನಡೆದಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ತಿಮ್ಮಯ್ಯ, ಚಾಮೂಲ್ ನಿರ್ದೇಶಕ ಎಚ್.ಎಸ್. ನಂಜುಂಡ ಪ್ರಸಾದ್, ಮಾಜಿ ಶಾಸಕರಾದ ನಂಜುಂಡ ಸ್ವಾಮಿ, ಮಾಜಿ ಸಂಸದ ಎಂ.ಶಿವಣ್ಣ, ಜಿಲ್ಲಾ ಅಧ್ಯಕ್ಷ ಮರಿಸ್ವಾಮಿ, ಬಿ.ಕೆ.ರವಿಕುಮಾರ್, ಜಿ.ಕೆ.ನಾಜೀಮುದ್ದೀನ್, ಹೆಚ್.ಎನ್.ಬಸವರಾಜು.ಎಸ್.ಆರ್.ರಾಜಶೇಖರ್, ಶಿವನಾಗಪ್ಪ, ಮಹಾದೇವಪ್ಪ, ನಿಟ್ರೆನಾಗರಾಜು, ಪುಟ್ಟಸ್ವಾಮಾಚಾರ್, ಕೇರಳ್ಳಿ ನವೀನ್, ಹಂಗಳ ಗಂಗಪ್ಪ, ಎಚ್.ಎನ್.ನಟೇಶ್, ಸೇರಿದಂತೆ ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎಸ್.ಮಹೇಶ್, ಮಾಜಿ ಸಂಸದ ಎ.ಸಿದ್ದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಪಿ.ಬಿ.ರಾಜಶೇಖರ್, ಬಿ.ಎಂ.ಮುನಿರಾಜು, ಎ.ಪಿ.ಎಂ.ಸಿ.ಅಧ್ಯಕ್ಷ ಮುಳ್ಳಯ್ಯನ ಹುಂಡಿ ಬಸವರಾಜು ಹಾಜರಿದ್ದರು.
ಬಾಕ್ಸ್ ಗಳು….
ನನ್ನ ಗೆಲುವಿಗೆ ಸಹಕರಿಸಿ: ಬಳಿಕ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನೀಲ್ ಬೋಸ್ ಮಾತನಾಡಿ, ಜನ ಸೇವೆಯೇ ನನ್ನ ಮೂಲ ತತ್ವವಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷ ಭರವಸೆಯಿಂದ ನನ್ನನ್ನು ಆಯ್ಕೆ ಮಾಡಿದ್ದು, ನಮ್ಮ ಲೋಕಸಭಾ ಕ್ಷೇತ್ರದ ಪ್ರತಿಯೊಂದು ವಿಭಾಗದಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲು ಪಕ್ಷದ ಕಾರ್ಯಕರ್ತರು ಮುಖಂಡರು ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ನನ್ನ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ವಿರೋಧ ಪಕ್ಷದವರ ಟೀಕೆಗೆ ಮಣೆ ಬೇಡ: ಕಾರ್ಯಕ್ರಮದ ನೇತೃತ್ವ ವಹಿಸಿ ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯೇ ಮೂಲ ಮಂತ್ರವಾಗಿದ್ದು ವಿರೋಧಪಕ್ಷದವರ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಹಾಗೂ ಕ್ಷೇತ್ರದಲ್ಲಿ ಎಷ್ಟು ಬೂತ್ ಗಳಿವೆ ಎಂಬ ಅಂಕಿ ಅಂಶ ಗೊತ್ತಿಲ್ಲದ ವಿರೋಧ ಪಕ್ಷದವರು ಇನ್ನೂ ಕ್ಷೇತ್ರ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ?. ಆ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಸೇರಿದಂತೆ ನಮ್ಮ ಪಕ್ಷದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರ ಅಭಿವೃದ್ಧಿ ಮಾಡಲು ಕಾರ್ಯಕರ್ತರು ಮುಖಂಡರು ಬೂತ್ ಮಟ್ಟದಲ್ಲಿ ಶಕ್ತಿ ಮೀರಿ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಶ್ರಮವಹಿಸಬೇಕೆಂದು ಕರೆ ನೀಡಿದರು.
ಫೋಟೋ ಇದೆ