ಎರಡು ಅಮೃತ್ ಭಾರತ್ ರೈಲುಗಳು ಹಾಗೂ 6 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.ಅಯೋಧ್ಯಯ ಅಯೋಧ್ಯಾ ಧಾಮ್ ರೈಲು ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ನೂತನ ರೈಲುಗಳಿಗೆ ಚಾಲನೆ ನೀಡಿದರು. ಅಯೋಧ್ಯೆ ಮಾತ್ರವಲ್ಲದೆ, ದೇಶದ ಇತರೆಡೆಗಳ ವಂದೇ ಭಾರತ್ ರೈಲುಗಳಿಗೂ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಇದರಲ್ಲಿ ಕರ್ನಾಟಕದ ಮಂಗಳೂರಿನಿಂದ ಗೋವಾಕ್ಕೆ ತೆರಳುವ, ಬೆಂಗಳೂರಿನಿಂದ ಕೊಯಮತ್ತೂರಿಗೆ ತೆರಳುವ ವಂದೇ ಭಾರತ್ ರೈಲುಗಳು ಮತ್ತು ಮಾಲ್ಡಾ ಬೆಂಗಳೂರು ಅಮೃತ್ ಭಾರತ್ ಎಕ್ಸ್ಪ್ರೆಸ್ ಕೂಡ ಸೇರಿವೆ.
ಯಾವೆಲ್ಲ ವಂದೇ ಭಾರತ್ ರೈಲುಗಳಿಗೆ ಚಾಲನೆ?
ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ – ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ಆರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಯಿತು. ಉಳಿದವುಗಳೆಂದರೆ, ಅಮೃತಸರ – ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್, ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್ಪ್ರೆಸ್, ಮಂಗಳೂರು – ಮಡ್ಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್, ಜಲ್ನಾ – ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್, ಮತ್ತು ಅಯೋಧ್ಯೆ – ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿವೆ.
ಅಮೃತ್ ಭಾರತ್ ಎಕ್ಸ್ಪ್ರೆಸ್ ಎಲ್ಲೆಲ್ಲಿಗೆ?
ಹೊಸ ಅಮೃತ್ ಭಾರತ್ ರೈಲುಗಳು ದರ್ಭಾಂಗ – ಅಯೋಧ್ಯೆ – ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್ಪ್ರೆಸ್ ಮತ್ತು ಮಾಲ್ಡಾ ಟೌನ್ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್ಪ್ರೆಸ್ ಆಗಿವೆ.
ರೈಲು ಮೂಲಸೌಕರ್ಯವನ್ನು ಬಲಪಡಿಸಲು 2300 ಕೋಟಿ ರೂ. ಮೌಲ್ಯದ ಮೂರು ರೈಲ್ವೆ ಯೋಜನೆಗಳನ್ನು ಕೂಡ ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇವುಗಳಲ್ಲಿ ರೈಲು ಮೂಲಸೌಕರ್ಯವನ್ನು ಬಲಪಡಿಸಲು 2300 ಕೋಟಿ ರೂ. ಮೌಲ್ಯದ ಮೂರು ರೈಲ್ವೆ ಯೋಜನೆಗಳನ್ನು ಕೂಡ ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇವುಗಳಲ್ಲಿ ರೂಮಾ ಚಕೇರಿ – ಚಂದೇರಿ ಥರ್ಡ್ ಲೈನ್ ಪ್ರಾಜೆಕ್ಟ್, ಜಾನುಪುರ – ತುಳ್ಸಿ ನಗರ, ಅಕ್ಬರ್ಪುರ – ಅಯೋಧ್ಯೆ, ಸೊಹವಾಲ್ – ಪತ್ರಾಂಗ, ಸಫ್ದರ್ಗಂಜ್ – ರಸೌಲಿ, ಜಾನುಪುರ್ – ಅಯೋಧ್ಯಾ – ಬಾರಾಬಂಕಿ ಡಬ್ಲಿಂಗ್ ಪ್ರಾಜೆಕ್ಟ್ ಒಳಗೊಂಡಿವೆ.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ರೋಡ್ ಶೋ ನೆರವೇರಿಸಿದರು.
ಅಯೋಧ್ಯೆ ವಿಮಾನ ನಿಲ್ದಾಣ ತಲುಪಿದ ನಂತರ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ತಲುಪಿದರು. ಈ ನಡುವೆ ರೋಡ್ ಶೋ ನಡೆಸಿದರು. ಅಪಾರ ಸಂಖ್ಯೆಯ ಅಭಿಮಾನಿಗಳು ಮೋದಿ ಅವರಿಗೆ ಭರ್ಜರಿ ಸ್ವಾಗತ ನೀಡಿದರು.