ಗದಗ: ಬಾಲ್ಯ ವಿವಾಹ ಅಪರಾಧ ಎಂದು ನಿರಂತರ ಜಾಗೃತಿ ಮಾಡಲಾಗುತ್ತಿದೆ. ಆದ್ರೆ, ಇನ್ನು ಬಾಲ್ಯ ವಿವಾಹ ಎನ್ನುವ ಅನಿಷ್ಠ ಪದ್ಧತಿ ಮಾತ್ರ ನಿಲ್ಲುತ್ತಿಲ್ಲ. ಕಾನೂನು ಹಾಗೂ ಅಧಿಕಾರಿಗಳ ಕಣ್ಣು ತಪ್ಪಿಸಿ ಬಾಲ್ಯ ವಿವಾಹ ನಡೆಯುತ್ತಿವೆ. ಏ.26 ಗದಗದಲ್ಲಿ ನಡೀತಿದ್ದ ಬಾಲ್ಯ ವಿವಾಹವೊಂದಕ್ಕೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ನಗರದ ಕರ್ನಾಟಕ ಭವನದಲ್ಲಿ ಗದಗ ತಾಲೂಕಿನ ಕೊಟುಮಚಗಿ ಗ್ರಾಮದ ಇಬ್ಬರು ಸಹೋದರರ ಮದುವೆ ನಿಶ್ಚಿಯ ಮಾಡಲಾಗಿತ್ತು. ಆದ್ರೆ, ಕಿರಿಯ ಸಹೋದರನ ಮದುವೆ ಆಗುತ್ತಿರುವ ಬಾಲಕಿಗೆ ಇನ್ನೂ 18 ವರ್ಷ ಆಗಿರಲಿಲ್ಲ. ಆದರೂ ಕೂಡ ಪೋಷಕರು ಸೇರಿಕೊಂಡು ಮದುವೆ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದರು.
ಮುಂಜಾನೆಯಿಂದ ಮದುವೆಯ ಕಾರ್ಯಗಳನ್ನು ಮುಗಿಸಿ, ಇನ್ನೇನು ಮಾಂಗಲ್ಯಧಾರಣೆ ಆಗಬೇಕು ಎನ್ನುವ ಸಮಯದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಪೊಲೀಸರು ಎಂಟ್ರಿ ನೀಡಿದ್ದರು. ಈ ವೇಳೆ ಬಾಲಕಿಯ ವಯಸ್ಸು, ವಿವರ, ನೀಡಿದಾಗ ಬಾಲಕಿಗೆ 18 ವರ್ಷ ತುಂಬಲು ಇನ್ನೂ 15 ದಿನಗಳು ಬಾಕಿ ಇದ್ದವು. ಹೀಗಾಗಿ ಮದುವೆಗೆ ಬ್ರೇಕ್ ಹಾಕಿದ್ದಾರೆ. ಪೋಷಕರ ಮನವೊಲಿಸಿ, ಪೋಷಕರಿಂದ ಮುಚ್ವಳಿಕೆ ಪತ್ರವನ್ನು ಬರಿಸಿಕೊಂಡು ಮದುವೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಸಮಾಜದ ಮುಖಂಡರು ಕೂಡ ಕುಟುಂಬದ ಮನವೊಲಿಸಿ ಅಧಿಕಾರಿಗಳ ಕಾರ್ಯಕ್ಕೆ ಸಾಥ್ ನೀಡಿದರು.
ಇನ್ನು ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡುತ್ತಿದ್ದ ಪೋಷಕರು ಅನಕ್ಷರಸ್ಥರು, ಅವರಿಗೆ ಅಷ್ಟೊಂದು ಕಾನೂನು ಗೊತ್ತಿಲ್ವಂತೆ. ಹೀಗಾಗಿ ಸಹೋದರನ ಜೊತೆ ಕಿರಿಯ ಸಹೋದರನ ಮದುವೆ ಮಾಡಿದ್ರೆ, ಹಣವು ಉಳಿಯುತ್ತೇ ಎನ್ನುವ ಲೆಕ್ಕಾಚಾರ ಹಾಕಿಕೊಂಡು ಎರಡು ಮದುವೆ ಮಾಡಲು ಮುಂದಾಗಿದ್ದರು. ಆದ್ರೆ, ಕಿರಿಯ ಸಹೋದರ ಮದುವೆ ಆಗುವ ಬಾಲಕಿ ಆಗಿರೋದರಿಂದ ಮದುವೆ ಸ್ಟಾಪ್ ಮಾಡಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಹಾಗೂ ಬಂಧು ಬಳಗ ಕೆಲವು ಸಮಯ ವಿಚಲಿತರಾಗಿದ್ರು. ಹಿರಿಯರು ಹಾಗೂ ಅಧಿಕಾರಿಗಳು ಸಮಾಲೋಚನೆ ಮಾಡಿ, ಹಿರಿಯ ಸಹೋದರನ ಮದುವೆ ಒಪ್ಪಿಗೆ ನೀಡಿದರು.
ಬಾಲಕಿಗೆ 18 ವರ್ಷವಾದ ಮೇಲೆ ಮದುವೆ ಮಾಡುತ್ತೇವೆ ಎಂದು ಪೋಷಕರು ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟರು. ಕಾನೂನು ಹಾಗೂ ಅಧಿಕಾರಿಗಳ ಮಾತಿನಂತೆ ಮದುವೆ ಸ್ಟಾಪ್ ಮಾಡಿದ್ದೇವೆ. ಮುಂದೆ 18 ವರ್ಷವಾದ ಮೇಲೆ ಮದುವೆ ಮಾಡುತ್ತೇವೆ ಎಂದು ಹಿರಿಯರು. ಬಾಲಕಿಯನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದು ಬಾಲ ಮಂದಿರದಲ್ಲಿ ಆಶ್ರಯ ನೀಡಿದ್ದಾರೆ. ಒಟ್ಟಿನಲ್ಲಿ ಪೊಲೀಸರು ಹಾಗೂ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಬಾಲ್ಯ ವಿವಾಹವನ್ನು ಯಶಸ್ವಿಯಾಗಿ ನಿಲ್ಲಿಸಿ, ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.