ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಬರಪರಿಸ್ಥಿತಿ ಉಂಟಾಗಿದ್ದು ಈ ಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ವಿರುದ್ದ ಮಂಡ್ಯದಲ್ಲಿ ಆಕ್ರೋಶ ಮತ್ತಷ್ಟು ಭುಗಿಲೆದ್ದಿದೆ.
ಈ ಮಧ್ಯೆ ಕಾವೇರಿ ಪರ ಧ್ವನಿ ಎತ್ತದ ಬೆಂಗಳೂರಿಗರಿಗೆ ನೀರು ಹರಿಸಬೇಡಿ ಎಂದು ಆಗ್ರಹಿಸಿ ಇಂದು ಕನ್ನಡ ಪರ ಸಂಘಟನೆ ಹಾಗೂ ಕಾವೇರಿ ಹೋರಾಟ ಸಮಿತಿಯು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿಕೆ ಹಳ್ಳಿಯ ನೀರು ಸಂಸ್ಕರಣಾ ಘಟಕದ ಬಳಿ ಪ್ರತಿಭಟನೆ ನಡೆಸಿತು.
ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಬಳಿ ಇರುವ ಪಂಪ್ ಹೌಸ್ ಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರು, ಕಾವೇರಿ ಪರ ಧ್ವನಿ ಎತ್ತದ ಬೆಂಗಳೂರಿಗರ ವಿರುದ್ದ ಕಿಡಿಕಾರಿದರು. ಬೆಂಗಳೂರು ಜನರಿಗೆ ಕಾವೇರಿ ನೀರು ಹರಿಸಬೇಡಿ. ಕಾವೇರಿ ನೀರು ಕುಡಿದು ಪ್ರತಿಭಟಿಸದವರಿಗೆ ನೀರು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.