ಹೊರಗುತ್ತಿಗೆ ನೌಕರರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಪ್ರತಿನಿಧಿ ವರದಿ ಯಳಂದೂರು
ಹೊರ ಗುತ್ತಿಗೆ ನೌಕರರ ಮೇಲೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರಿನ ಕಾಂತಿ ಏಜೆನ್ಸಿಯಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆಯ ಸದಸ್ಯರು ಪಟ್ಟಣದ ಸಮಾಜ ಕಲ್ಯಾಣ ಕಚೇರಿ ಎದುರು ಪ್ರತಿಭಟಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಪರಶಿವಮೂರ್ತಿ ಮಾತನಾಡಿ, ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಳೆದ 10 ವರ್ಷಗಳಿಂದ ಗುರುಸ್ವಾಮಿ ಎಂಬುವರು ಹೊರಗುತ್ತಿಗೆಎಂಬುವರು ನೌಕರ ಡಾಟಾ ಎಂಟ್ರಿ ಆಪರೇಟರಾಗಿ ಕೆಲಸ ನಿರ್ವಹಿಸಿದ್ದು ಇವರಿಗೆ ಸರಿಯಾಗಿ ವೇತನ, ಇಎಸ್ಐ ಹಾಗೂ ಪಿಎಫ್ ನೀಡುತ್ತಿಲ್ಲ. ಈ ಬಗ್ಗೆ ಉಪ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಕ್ರಮ ವಹಿಸಿಲ್ಲ. ಇದರೊಂದಿಗೆ ಅನೇಕ ಹೊರಗುತ್ತಿಗೆ ನೌಕರರಿಗೆ ವಿನಾಕಾರಣ ಕೆಲಸದಿಂದ ಹೊರ ಹಾಕಲಾಗಿದೆ. ಅಡುಗೆ ಸಹಾಯಕರೂ ಇದರಲ್ಲಿ ಸೇರಿದ್ದಾರೆ. ಈ ಬಗ್ಗೆ ಸಂಘಸಂಸ್ಥೆಗಳ ಪ್ರತಿನಿಧಿಗಳೂ ಕೂಡ ಈ ಹಿಂದೆ ಪ್ರತಿಭಟನೆ ನಡೆಸಿದ್ದರೂ ಕ್ರಮ ವಹಿಸುತ್ತಿಲ್ಲ. ಕವಿತ ಹಾಗೂ ರೇಣುಕಾ ಎಂಬವರಿಗೆ 5 ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಮಕ್ಕಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟವೂ ಕಡಿಮೆ ಇದೆ. ಬಯೋಮೆಟ್ರಿಕ್ ಸರಿಯಾಗಿ ಬಳಕೆಯಾಗುತ್ತಿಲ್ಲ. ಕಾಂತಿ ಏಜೇನ್ಸಿಸ್ನಿಂದ ವೇತನ ಪಾವತಿ, ಇಎಸ್ಐ, ಪಿಎಫ್ನಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ಈ ಹಿಂದೆ ಉಪನಿರ್ದೇಶಕರಿಗೂ ಮನವಿ ಮಾಡಿದ್ದರೂ ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದರು.
ಸ್ಥಳಕ್ಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭೇಟಿ ನೀಡಿ, ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಇಲ್ಲಿನ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗುರುಸ್ವಾಮಿ ಎಂಬವರು ಕಚೇರಿಯ ಗೌಪ್ಯ ಮಾಹಿತಿಯನ್ನು ಹೊರಗಿನ ವ್ಯಕ್ತಿಗಳಿಗೆ ಸೋರಿಕೆ ಮಾಡುತ್ತಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೂ ಕೂಡ ಧಮ್ಕಿ ಹಾಕುತ್ತಿದ್ದರು. ಈ ಬಗ್ಗೆ ಕೆಲ ಸಾರ್ವಜನಿಕರು ನಮ್ಮ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ನಮ್ಮ ಕಚೇರಿಯಲ್ಲಿ ದಾಖಲೆಗಳು ಇವೆ. ಹಾಗಾಗಿ ಇವರನ್ನು ಹಿರಿಯ ಅಧಿಕಾರಿಗಳು ಇವರನ್ನು ಕೆಲಸದಿಂದ ವಜಾ ಮಾಡಿ ಎಂದು ಆದೇಶ ಮಾಡಿರುವುದರಿಂದ ಇವರನ್ನು ತೆಗೆದು ಹಾಕಲಾಗಿದೆ. ಮುಂದೆ ಇಂತಹ ಕೆಲಸಗಳನ್ನು ಮಾಡುವುದಿಲ್ಲ ಎಂದು ಗುರುಸ್ವಾಮಿಯಿಂದ ಕ್ಷಮಾಪಣೆ ಪತ್ರವನ್ನು ಬರೆಯಿಸಿಕೊಂಡು, ಮತ್ತೆ ಹೊರ ಗುತ್ತಿಗೆ ಆದಾರದ ಮೇಲೆ ಕೆಲಸಕ್ಕೆ ನೇಮಿಸಿಕೊಳ್ಳಲು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.
ಜಿಲ್ಲಾ ಕಾರ್ಯದರ್ಶಿ ಬದನಗುಪ್ಪೆ ಮಹೇಶ್, ಎಂ. ರಾಜಣ್ಣ, ಸಿದ್ದರಾಜು, ಮದ್ದೂರು ಪ್ರಸಾದ್, ಮರಪ್ಪ, ರಾಜು, ಬಸವಾಪುರ ರಾಜಶೇಖರ್, ಚಂಗಚಹಳ್ಳಿ ನಾಗೇಂದ್ರ, ಕೊಮಾರನಪುರ, ಮರಯ್ಯ ಕೆಸ್ತೂರು, ರಾಜಣ್ಣ, ಜೋಗಿ ಸಿದ್ಧಯ್ಯ, ಶಿವಣ್ಣ ಸೇರಿದಂತೆ ಇತರರು ಇದ್ದರು.
28ವೈಎಲ್ಡಿ.1:
ಚಿತ್ರವಿದೆ