ಮುಡಾ ಆಯುಕ್ತರನ್ನು ಬಂಧನಕ್ಕೆ ಆಗ್ರಹ
ಪ್ರತಿನಿಧಿ ವರದಿ ಮೈಸೂರು
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಂತರ ರೂಪಾಯಿ ಹಗರಣ ಆಗಿರುವುದನ್ನು ಖಂಡಿಸಿ ಮುಡಾ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಂತರ ರೂಪಾಯಿ ಹಗರಣ ಮಾಡಿರುವ ಮುಡಾ ಆಯುಕ್ತರನ್ನು ಕೂಡಲೇ ಬಂಧಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸುಮಾರು ನಾಲ್ಕರಿಂದ ಐದು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿ, ಮೈಸೂರಿನ ಇತಿಹಾಸದಲ್ಲಿಯೇ ಭಾರೀ ಪ್ರಮಾಣದ ಭೂ ದರೋಡೆ ಮಾಡಿರುವುದು ಮುಡಾದಲ್ಲಿ ಬೆಳಕಿಗೆ ಬಂದಿರುವುದು ಅತ್ಯಂತ ಖಂಡನೀಯ ಎಂದರು.
ಬದಲಿ ನಿವೇಶನ ನೀಡದಂತೆ ಎರಡು ವರ್ಷದ ಹಿಂದೆಯೇ ಸರ್ಕಾರ ಆದೇಶ ಮಾಡಿದೆ. ಅತಿ ಅಗತ್ಯ ಬಿದ್ದರೆ ಮಾತ್ರ ಸರ್ಕಾರದ ಅನುಮತಿ ಪಡೆದು ಹಂಚಿಕೆಗೆ ತಾಕೀತು ಮಾಡಿದ್ದರೂ, ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ನಿಯಮ ಬಾಹಿರವಾಗಿ, ಬದಲಿ ನಿವೇಶನ ಹಂಚಿಕೆ ಮಾಡಿ ಸುಮಾರು 3 ಸಾವಿರ ಕೋಟಿ ಹಗರಣ ಮಾಡಿ, ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.
ಮುಡಾ ಆಯುಕ್ತ ದಿನೇಶ್ ಕುಮಾರ್ ಮೂಡಾ ಕಚೇರಿಯಲ್ಲಿ ಬಹಳಷ್ಟು ಫೈಲ್ ಗಳೇ ಸಿಗದಂತೆ ಮಾಡಿ, ಊರಾಚೆಯ ಹಳ್ಳಿ ಸೈಟ್ ಗಳಿಗೂ ಮೈಸೂರಿನ ಐಷಾರಾಮಿ ಲೇಔಟ್ ನಲ್ಲಿ ಬದಲಿ ನಿವೇಶನಗಳನ್ನು ನೀಡಿದ್ದಾರೆ. ಇದರ ಜತೆಗೆ ಅವರ ಮನೆಯಲ್ಲಿಯೇ ಸುಮಾರು 146 ಸೈಟ್ ಫೈಲ್ ಗಳು ಸಿಕ್ಕಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.
ಮುಖ್ಯಮಂತ್ರಿಗಳ ತವರಿನಲ್ಲಿ, ರಾಜ ಮಹಾರಾಜರುಗಳು ಆಳಿದ ನಗರದಲ್ಲಿ ನಡೆದಿರುವ ಬಹುಕೋಟಿ ದೊಡ್ಡ ಹಗರಣವಾಗಿದ್ದು, ಇತ್ತೀಚೆಗಷ್ಟೇ ವಾಲ್ಮೀಕಿ ನಿಗಮದ 187 ಕೋಟಿ ಹಗರಣದಂತೆ ಇದು ಕೂಡ ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಹಗರಣ ವಾಗಿರಬಹುದು ಎಂಬ ಶಂಕೆ ಜನತೆಯಲ್ಲಿದೆ ಎಂದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಪ್ರಭುಶಂಕರ್, ಕೃಷ್ಣಪ್ಪ, ಕುಮಾರ್ ಗೌಡ, ಶಿವಲಿಂಗಯ್ಯ, ಅಂಬಾ ಅರಸ್, ನೇಹಾ, ಮಂಜುಳಾ, ಭಾಗ್ಯಮ್ಮ, ನಾರಾಯಣಗೌಡ, ಪರಿಸರ ಚಂದ್ರು, ವಿಜಯೇಂದ್ರ, ಆನಂದ್, ರಾಮಕೃಷ್ಣ, ರವಿ ಒಲಂಪಿಯ, ರಾಧಾಕೃಷ್ಣ, ಅಕ್ಬರ್, ರವೀಶ್, ಸ್ವಾಮಿ ಗೌಡ, ಆರ್ ಮಹದೇವ್, ದರ್ಶನ್ ಗೌಡ, ಪ್ರದೀಪ್, ದಿನೇಶ್, ರಘು ಅರಸ್, ವಿಷ್ಣು, ಬಸವರಾಜು, ಹನುಮಂತಯ್ಯ, ರಮೇಶ್, ಗಣೇಶ್, ಶಿವನಾಯಕ್ ಹಾಗೂ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.