ಚೆನ್ನೈ ಕಾರಿಡಾರ್ ರಸ್ತೆಯ ಕಾಮಗಾರಿಯಿಂದ ರೈತರಿಗೆ ನಷ್ಟ
ಪ್ರತಿನಿಧಿ ವರದಿ ಕೋಲಾರ
ಟಿಪ್ಪರ್, ಲಾರಿಗಳ ದೂಳಿನಿಂದ ನಷ್ಟವಾಗಿರುವ ರೈತರ ಬೆಳೆಗಳಿಗೆ ಪರಿಹಾರ ನೀಡಲು ನಿರಾಕರಿಸುತ್ತಿರುವ ಚೆನ್ನೈ ಕಾರಿಡಾರ್ ರಸ್ತೆಯ ಗುತ್ತಿಗೆದಾರ ವಿರುದ್ಧ ಬುಧವಾರ ಕ್ಯಾಂಪಸ್ ಗೇಟ್ ನಲ್ಲಿ ರೈತ ಸಂಘ ಹಾಗೂ ರೈತರು ಪ್ರತಿಭಟನೆ ನಡೆಸಿದರು.
ರೈತ ಕಲ್ಕರೆ ಸತೀಶ್ಗೌಡ ಮಾತನಾಡಿ, ಬರ, ಪ್ರಕೃತಿ ವಿಕೋಪ, ಕಳಪೆ ಬಿತ್ತನೆ ಬೀಜ, ಕೀಟನಾಶಕ ಹಾವಳಿಯಿಂದ ರೋಗಗಳು ನಿಯಂತ್ರಣಕ್ಕೆ ಬಾರದೆ ಲಕ್ಷಾಂತರ ರೂ. ಬಂಡವಾಳ ಹಾಕಿ ಕೈ ಸುಟ್ಟುಕೊಳ್ಳುತ್ತಿರುವ ರೈತರಿಗೆ ಕೇಂದ್ರ ಸರ್ಕಾರದ ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ದಿ ಮಾರಕವಾಗಿ ಪರಿಣಮಿಸಿದೆ.
ಖಾಸಗಿ ಸಾಲ ಮಾಡಿ ಬೆಳೆದಿರುವ ನೂರಾರು ಎಕರೆ ತರಕಾರಿ ಬೆಳೆಗಳು ದೂಳಿನಿಂದ ಸಂಪೂರ್ಣವಾಗಿ ನಾಶವಾಗಿದ್ದರೂ ಸಮಸ್ಯೆಯನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂ ಸ್ವಾಧೀನ ಮಾಡಿಕೊಳ್ಳುವಾಗ ರೈತರಿಗೆ ತೊಂದರೆಯಾಗದಂತೆ ರಸ್ತೆ ಅಭಿವೃದ್ಧಿ ಸ್ಥಳದಿಂದ ೨೦೦ ಮೀಟರ್ ವ್ಯಾಪ್ತಿಯಲ್ಲಿ ಪ್ರತಿದಿನ ನೀರನ್ನು ಸುರಿಸಿ ದೂಳು ಏಳದಂತೆ ಜಾಗೃತಿ ವಹಿಸಬೇಕೆಂದು ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚನೆ ನೀಡಿದರೂ ಆ ಸೂಚನೆ ಪೇಪರ್ಗೆ ಮಾತ್ರ ಸೀಮಿತವಾಗಿ ಪ್ರತಿದಿನ ಪ್ರತಿಕ್ಷಣ ರೈತರು ಬೆಳೆದಿರುವ ಬೆಳೆಗಳ ಮೇಲೆ ದೂಳು ಕುಳಿತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ನಮ್ಮ ತೋಟದ ಬೆಳೆಗಳನ್ನು ಹರಾಜು ಸಹ ಹಾಕುತ್ತಿಲ್ಲವೆಂದು ಅಧಿಕಾರಿಗಳಿಗೆ ಹಿಡಿ ಶಾಪಹಾಕಿದರು.
ಪರಿಹಾರ ವಿತರಣೆ ಮಾಡುತ್ತೇವೆಂದು ಭರವಸೆ ನೀಡಿದ್ದ ಡಿಬಿಎಲ್ ಗುತ್ತಿಗೆದಾರರನ್ನು ಕೇಳಿದರೆ ನಿರ್ಲಕ್ಷ್ಯ ಹಾಗೂ ದೌರ್ಜನ್ಯ ಮಾಡುವ ಜತೆಗೆ ಕಾಮಗಾರಿಗೆ ಅಡ್ಡಪಡಿಸಿದರೆ ನಿಮ್ಮ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡುತ್ತೇವೆಂದು ರೈತರ ಮೇಲೆಯೇ ದಬ್ಬಾಳಿಕೆ ಮಾಡುತ್ತಾರೆಂದು ಆರೋಪ ಮಾಡಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಶ್ರೀಮಂತರಿಗೆ ಅನುಕೂಲವಾಗುವ ಚೆನ್ನೈ ಕಾರಿಡಾರ್ ರಸ್ತೆ ರೈತರ ಬೆವರ ಹನಿಯನ್ನು ಕಸಿದು ಸಾಲಗಾರರನ್ನಾಗಿ ಮಾಡುತಿದ್ದು, ರೈತರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜತೆಗೆ ಭೂಮಿ ಕೊಟ್ಟ ತಪ್ಪಿಗೆ ರೈತರು ಉಳಿದಿರುವ ಜಮೀನುಗಳಿಗೆ ಹಾದು ಹೋಗಲು ೧೦-೧೫ ಕಿಲೋಮೀಟರ್ ಸುತ್ತು ಹಾಕಿಕೊಂಡು ಬರಬೇಕಾದ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಚೆನ್ನೈ ಕಾರಿಡಾರ್ ಗುತ್ತಿಗೆದಾರರ ನಿರ್ಲಕ್ಷ್ಯ ದಿಂದ ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆಅಧಿಕಾರಿಗಳಿಗೆ ವರದಿ ನೀಡಿದರೂ ವರದಿಗೆ ತಕ್ಕ ಹಣವನ್ನು ನೀಡುತ್ತಿಲ್ಲವೆಂದರು. ಜತೆಗೆ ನೊಂದ ರೈತರಿಗೆ ಪರಿಹಾರ ನೀಡುವರೆಗೂ ಕ್ಯಾಂಪಸ್ ಗೇಟ್ನಿಂದ ಯಾವುದೇ ವಾಹನವನ್ನು ಹೊರಗಡೆ ಹೋಗದಂತೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಘೇರಾವು ಹಾಕುವ ಮೂಲಕ ಹೋರಾಟವನ್ನು ಮುಂದುವರೆಸಿದರು.
ಹೋರಾಟದಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗಿರೀಶ್, ಹರೀಶ್, ರಾಮಪ್ಪ, ಯಲ್ಲಣ್ಣ, ವೆಂಕಟೇಶಪ್ಪ, ವೆಂಕಟಪ್ಪ, ಎಂ.ಎಸ್.ಆನಂದ್, ಮುಂತಾದ ನೂರಾರು ರೈತರು ಹಾಜರಿದ್ದರು.