ನಮ್ಮ ನೀರು, ನಮ್ಮ ಹಕ್ಕು ಎಂಬ ಘೋಷವಾದ್ಯದಡಿ ಆಕ್ರೋಶ
ಮಡಿಕೇರಿ: ನದಿ ಹಾಗೂ ನದಿ ಮೂಲಗಳಿಂದ ಅನ್ಯಬಳಕೆಗೆ ನೀರು ಬಳಸುವುದನ್ನು ನಿಷೇಧ ಮಾಡಿರುವ ಜಿಲ್ಲಾಧಿಕಾರಿಗಳ ಆದೇಶವನ್ನು ವಿರೋಧಿಸಿ ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ ನಮ್ಮ ನೀರು, ನಮ್ಮ ಹಕ್ಕು ಎಂಬ ಘೋಷವಾದ್ಯದಡಿ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಡಳಿತ ಕಚೇರಿ ಎದುರು ಜಮಾಯಿಸಿದ ಸಂಘದ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿ ರೈತರಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗಿದೆ ಹೊರತು ರೈತರಿಂದಲ್ಲ. ಅರಣ್ಯಕ್ಕಿಂತ ಹೆಚ್ಚಿನ ಗಿಡ-ಮರಗಳು ತೋಟಗಳಲ್ಲಿವೆ. ಪ್ರಕೃತಿಯನ್ನು ಪೂಜಿಸುವ ರೈತರು ನೀರನ್ನು ಬಳಸಲು ನಿಜವಾದ ಹಕ್ಕುದಾರರು ಎಂದರು.
ಜಿಲ್ಲಾಡಳಿತ ಆದೇಶ ರೈತರಿಗೆ ಮಾರಕವಾಗಲಿದ್ದು, ವಾಣಿಜ್ಯ ಉದ್ದೇಶ ಅಥವಾ ಬೇರೆ ವಿಚಾರಗಳಿಗೆ ನೀರು ಪೋಲು ಮಾಡುವುದನ್ನು ನಾವು ಒಪ್ಪುವುದಿಲ್ಲ. ರೈತರ ಬಳಕೆಗೆ ನಿರ್ಬಂಧ ಸರಿಯಲ್ಲ ಎಂದರು.
ನೀರಿನ ಸಂಗ್ರಹಕ್ಕೆ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕು, ಕೊಳವೆ ಬಾವಿಗಳ ನಿರ್ಮಾಣ ಮಾಡಬೇಕು, ಮಳೆ ಕೊಯ್ಲು, ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸಬೇಕು, ತಾಂತ್ರಿಕ ಸಮಿತಿ ರಚಿಸಿ ನೀರಿನ ಬಿಕ್ಕಟ್ಟು ಶಮನ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ರೈತ ಸಂಘದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟರಾಜಾ, ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಈ ಕ್ರಮ ವಹಿಸಲಾಗಿದೆ. ನೀರು ದಿಢೀರ್ ಬತ್ತಲು ಆರಂಭಿಸಿದ ಹಿನ್ನೆಲೆ ಅನ್ಯಬಳಕೆಗೆ ನಿಷೇಧಿಸಲಾಗಿದೆ. ರೈತರಿಗೆ ಈ ಆದೇಶದಿಂದ ಯಾವುದೇ ಸಮಸ್ಯೆಯಾಗದ ರೀತಿ ಚರ್ಚಿಸಿ ಕ್ರಮವಹಿಸಲಾಗುವುದು. ರೈತ ಸಂಘ ನೀಡಿದ ಸಲಹೆಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ವಿರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಪ್ರಮುಖರಾದ ಕಿಸ ಮಾಚಯ್ಯ, ತಾಣಚ್ಚಿರ ಲೆಹರ್ ಬಿದ್ದಪ್ಪ, ಚೆಟ್ಟಂಗಡ ಕಂಬ ಕಾರ್ಯಪ್ಪ, ಜೀವನ್, ಲಕ್ಷö್ಮಣ್ ಗೌಡ, ಅಶೋಕ್, ಮಂಜುನಾಥ್, ಸುರೇಶ್, ಪೊನ್ನಪ್ಪ ಇದ್ದರು.
ಫೋಟೋ :: ಪ್ರೊಟೆಸ್ಟ್