ಚೆನ್ನೈ ಕಾರಿಡಾರ್ ನಲ್ಲಿ ರೈತ ಸಂಘದಿಂದ ಪ್ರತಿಭಟನೆ
ಕೋಲಾರ: ಚೆನ್ನೈ ಕಾರಿಡಾರ್ ರಸ್ತೆ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಟಿಪ್ಪರ್ ಲಾರಿಗಳ ಹಾವಳಿಯ ಧೂಳಿನಿಂದ ನಷ್ಟವಾಗಿರುವ ರೈತರಿಗೆ ಪರಿಹಾರ ನೀಡುವಂತೆ ರೈತಸಂಘದಿಂದ ಕಾಮಗಾರಿ ಸ್ಥಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಸಮೇತ ಪ್ರತಿಭಟನೆ ನಡೆಸಿ ಗುತ್ತಿಗೆದಾರ ನಾಯ್ಡುಅವರಿಗೆ ೪೮ ಗಂಟೆ ಗಡುವಿನೊಂದಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರೈತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟ್ಯಾಂತರ ರೂಪಾಯಿ ಬೆಳೆ ಪರಿಹಾರವನ್ನು ಲೂಟಿ ಮಾಡಿ ಚೆನ್ನೈ ಕಾರಿಡಾರ್ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಧೂಳಿನಿಂದ ನಷ್ಟವಾಗಿರುವ ರೈತರ ವಾಣಿಜ್ಯ ಬೆಳೆಗಳಿಗೆ ಪ್ರತಿ ಎಕರೆಗೆ ೫ ಲಕ್ಷ ಪರಿಹಾರ ವಿತರಣೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧಿಕಾರಿಯನ್ನು ಮನವಿ ಮೂಲಕ ಒತ್ತಾಯಿಸಿದರು.
ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂ ಸ್ವಾಧೀನ ಮಾಡಿಕೊಂಡ ಸಮಯದಲ್ಲಿ ರೈತರಿಗೆ ಪರಿಹಾರ ನೀಡಲು ವಿಶೇಷ ಭೂಸ್ವಾಧೀನಾಧಿಕಾರಿಗಳು ಪಡೆದಿರುವ ದಾಖಲೆಗಳನ್ನೇ ದುರುಪಯೋಗ ಪಡಿಸಿಕೊಂಡು ಮಾಲೂರಿನಿಂದ ಮುಳಬಾಗಲು ಗಡಿಭಾಗದವರೆಗೆ ನೂರು ಕೋಟಿ ರೈತರ ಬೆಳೆ ಪರಿಹಾರದ ಹಣವನ್ನು ಲೂಟಿ ಮಾಡಿ ರೈತರಿಗೆ ಮೂರು ನಾಮ ಹಾಕುತ್ತಿದ್ದಾರೆಂದು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರಕ್ಕಾಗಿ ನೊಂದ ರೈತರು ಅಂಗಲಾಚಿ ಬೇಡಿದರೂ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ರೈತರ ಅರ್ಜಿಯನ್ನು ಸ್ವೀಕರಿಸಲು ಪುರಸೊತ್ತಿಲ್ಲದ ವಿಶೇಷ ಭೂಸ್ವಾಧೀನಾಧಿಕಾರಿಗಳು ಅವರ ಗುಲಾಮರಂತೆ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ರೈತರ ಹೆಸರಿನಲ್ಲಿ ಲೂಟಿ ಮಾಡುತ್ತಿರುವ ಗುತ್ತಿಗೆದಾರರು ಈ ಮೂವರ ಮಧ್ಯೆ ಸಿಲುಕಿ ಬದುಕಲಾರದೆ, ಮಾಡಿದ ಸಾಲ ತೀರಿಸಲಾಗದೆ ಸಂಕಷ್ಟದಲ್ಲಿರುವ ರೈತರಿಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.
ಬರಗಾಲದಲ್ಲೂ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಕ್ಯಾಪ್ಸಿಕಂ, ಹೂ, ರೇಷ್ಮೆ, ಟೊಮೇಟೊ, ಬೆಳೆಗಳನ್ನು ಬರಗಾಲದಲ್ಲೂ ನೀರಿನ ಅಭಾವ, ವಿದ್ಯುತ್ ಅವ್ಯವಸ್ಥೆ, ರೋಗಗಳಿಂದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುತ್ತಾ ಬಂದರೆ ಮತ್ತೊಂದು ತಲೆನೋವು ರೈತರಿಗೆ ನಿದ್ದೆ ಗೆಡಿಸಿದೆ. ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ಭೂಸ್ವಾಧೀನಾ ಮಾಡಿಕೊಂಡು ಉಳಿಕೆ ಇರುವ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದಿರುವ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ರೈತರಿಗೆ ಹರಸಾಹಸವಾಗಿದೆ ಎಂದು ಅವ್ಯವಸ್ಥೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಸಮಸ್ಯೆ ಎಂದರೆ ಧೂಳು ಎಷ್ಟರ ಮಟ್ಟಿಗೆ ಇದೆ ಎಂದರೆ ನೀರಿನಲ್ಲಿ ತೊಳೆದರೂ ಧೂಳು ಮಾತ್ರ ಹೋಗುತ್ತಿಲ್ಲ. ಜೊತೆಗೆ ಸಂಬಂಧಪಟ್ಟ ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆ ಅಧಿಕಾರಿಗಳು ನಷ್ಟದ ಬಗ್ಗೆ ವರದಿ ನೀಡಿ ನಷ್ಟ ಪರಿಹಾರ ನೀಡುವಂತೆ ಗುತ್ತಿಗೆದಾರರಿಗೆ ನೀಡಿದರೆ ಗುತ್ತಿಗೆದಾರರು ವರದಿಯನ್ನು ಕಾಲು ಕಸದಂತೆ ಕಸದ ಬುಟ್ಟಿಗೆ ಹಾಕಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿ ಮಾಡಿ ಮಾಲೂರಿನಿಂದ ಮುಳಬಾಗಲು ಗಡಿಭಾಗದವರೆಗೆ ೧೦೦ ಕೋಟಿಗೂ ಹೆಚ್ಚು ಬೆಳೆ ಪರಿಹಾರವನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಆರೋಪಿಸಿದರು.
ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಮಾತನಾಡಿದ ಗುತ್ತಿಗೆದಾರ ನಾಯ್ಡು ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದು ನೊಂದ ರೈತರಿಗೆ ಪರಿಹಾರ ವಿತರಣೆ ಮಾಡುವ ಭರವಸೆಯನ್ನು ನೀಡಿದರು ಪ್ರತಿಭಟನೆಯಲ್ಲಿ ಮಂಗಸಂದ್ರ ತಿಮ್ಮಣ್ಣ, ಗಿರೀಶ್, ಶಿವಾರೆಡ್ಡಿ, ಪುತ್ತೇರಿ ರಾಜು, ಮರಗಲ್ ಮುನಿಯಪ್ಪ, ಶೈಲಜ, ರತ್ನಮ್ಮ, ವೆಂಕಟಮ್ಮ, ಗೌರಮ್ಮ, ಸುಪ್ರೀಂ ಚಲ, ವಿನು ಮುಂತಾದವರಿದ್ದರು.