ಪಂಪ್ಸೆಟ್ಗೆ ಆಧಾರ್ ಜೋಡಣೆ ಹಿನ್ನೆಲೆ
ಪ್ರತಿನಿಧಿ ವರದಿ ಹಾಸನ
ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಅವರಿಗೆ ಒಂದಲ್ಲ ಒಂದು ರೀತಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಸೆಸ್ಕ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಗರದ ಸಂತೆಪೇಟೆಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ಈ ಮೊದಲು ಬೇರೆ ಬೇರೆ ತೊಂದರೆ ಕೊಡುತ್ತಿದ್ದವರು, ಈಗ ಕೃಷಿ ಪಂಪ್ಸೆಟ್ಗಳಿಗೆ ಆಧಾರ್ ಲಿಂಕ್ ಮಾಡಿಸುವ ಬಗ್ಗೆ ಆದೇಶ ಹೊರಡಿಸಿರುವುದು ರೈತ ವಿರೋಧಿ ಎಂದು ಕಿಡಿಕಾರಿದರು.
ಈ ವೇಳೆ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಆನೆಕೆರೆ ರವಿ ಮಾತನಾಡಿ, ತಂದೆ, ತಾತನ ಹೆಸರಿನಲ್ಲಿ ಆರ್ಆರ್ ನಂಬರ್ ಇದ್ದು, ಇನ್ನು ಸಾವಿರಾರು ರೈತರು ಭೂಮಿಯನ್ನು ಬಗರು ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಕೆಲವರಿಗೆ ಖಾತೆ ಸೇರಿದಂತೆ ಇನ್ನಿತರ ದಾಖಲಾತಿ ವರ್ಗ ಆಗಿಲ್ಲ, ಕೆಲವರಿಗೆ ಜಮೀನೇ ಮಂಜೂರಾಗಿಲ್ಲ. ಇಂತಹ ಸಂದರ್ಭದಲ್ಲಿ ಕೊಳವೆ ಬಾವಿ ಕೊರೆಸಿದ್ದು, ಇದಕ್ಕೆಲ್ಲ ಆಧಾರ್ ಲಿಂಕ್ ಮಾಡಿಸಿ ಎಂಬ ಆದೇಶದಿಂದ ತೊಂದರೆಯಾಗುತ್ತಿದ್ದು, ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಅದರ ಭಾಗವಾಗಿ ಈಗ ಆಧಾರ್ ಲಿಂಕ್ ಮಾಡಿಸಿ ಎನ್ನುತ್ತಿದ್ದಾರೆ. ತಕ್ಷಣವೇ ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಬಾಬು, ನಂಬಿಗನಹಳ್ಳಿ ಕಮಲಮ್ಮ, ಬೋರನಹಳ್ಳಿ ಜಯರಾಮ, ವೆಂಕಟೇಶ್ ಗೌಡ, ಶಿವರಾಮೇಗೌಡ, ಕುಮಾರ್, ವಿಠಲ್, ಪವಿತ್ರಾ, ಸಿದ್ದಪ್ಪ, ಜವರೇಶ, ತಿಮ್ಮೇಗೌಡ, ಮೋಹನ್ ಇತರಿದ್ದರು.