ಮೈಸೂರು: ನವರಾತ್ರಿಯ ಸಂಭ್ರಮದಲ್ಲಿ ಮಿಂದಿರುವ ಮೈಸೂರಿನಲ್ಲಿ ಇಂದು ಎಲ್ಲೆಲ್ಲೂ ಜನವೋ ಜನ. ದಸರಾ ಸಂಬ್ರಮ ಒಂದೆಡೆಯಾದರೆ, ನಾಳೆಯ ಆಯುಧ ಪೂಜೆಯ ಸಂಭ್ರಮ ಮತ್ತೊಂದೆಡೆ. ಆಯುಧ ಪೂಜೆ ಹಿನ್ನೆಲೆ ಹಬ್ಬದ ಪರಿಕರಗಳನ್ನು ಕೊಂಡುಕೊಳ್ಳಲು ಜನರು ಮುಂದಾಗಿದ್ದು, ಬೇಡಿಕೆಗೆ ತಕ್ಕಂತೆ ಮೈಸೂರಿನ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ತಾತ್ಕಾಲಿಕ ಮಳಿಗೆಗಳು ತಲೆ ಎತ್ತಿದ್ದು, ಕಡ್ಲೆಪುರಿ, ಸಿಹಿ ಖಾರ ತಿನಿಸುಗಳು, ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಹಬ್ಬದ ಹಿನ್ನೆಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದ್ದು, ಏಲಕ್ಕಿ ಬಾಳೆಹಣ್ಣು ಕೆಜಿಗೆ 100 ರಿಂದ 120 ರೂಪಾಯಿಗೆ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ಬೂದು ಕುಂಬಳಕಾಯಿ 60 ರೂಪಾಯಿಂದ ಆರಂಭವಾಗಿ 100 ರೂಪಾಯಿವರೆಗೂ ಮಾರಾಟ ಮಾಡುತ್ತಿದ್ದಾರೆ. ಇನ್ನು ಸೇವಂತಿಗೆ ಹೂವು ಒಂದು ಮಾರಿಗೆ 150 ರೂಪಾಯಿಗೆ ಮಾರಾಟ ಮಾಡುತ್ತಿದ್ದು, ಸೇವಂತಿಗೆ ಹೂವಿನ ಇಳುವರಿ ಕುಸಿತದಿಂದಾಗಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಹೂವು ಬಂದಿರುವುದರಿಂದ ಹೂವಿನ ಬೆಲೆ ದುಬಾರಿಯಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು. ಉಳಿದಂತೆ ವಿವಿಧ ಬಗೆಯ ಹಣ್ಣುಗಳು, ಹೂವು, ನಿಂಬೆಹಣ್ಣು, ಬೂದು ಕುಂಬಳಕಾಯಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಬೆಲೆ ಏರಿಕೆಯ ನಡುವೆಯೂ ಜನ ನಾ ಮುಂದು ತಾ ಮುಂದು ಎಂದು ಖರೀದಿಯಲ್ಲಿ ತೊಡಗಿದ್ದಾರೆ.
ಮಧ್ಯಾಹ್ನದ ವೇಳೆಗೆ ಮೈಸೂರಿನಲ್ಲಿ ದಿಢೀರ್ ಮಳೆ ಆರಂಭವಾಗಿದ್ದು, ಧಾರಾಕಾರ ಮಳೆಯಿಂದಾಗಿ ಜನಸಾಮಾನ್ಯರ ಜನಜೀವನ ಅಸ್ತವ್ಯಸ್ತವಾಗಿದೆ. ಆಯುಧಪೂಜೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ಜನರು ಕಂಗಾಲು ಮಳೆಯಿಂದಾಗಿ ಕಂಗಾಲಾಗಿದ್ದಾರೆ. ದ್ವಿಚಕ್ರ ವಾಹನ ಸವಾರರು ಸೇರಿದಂತೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರು ಕೆಲಕಾಲ ಪರದಾಡಬೇಕಾಯಿತು.