ಬೆಂಗಳೂರು, ಜ.24: ಐಎನ್ಡಿಐಎ ಮೈತ್ರಿಕೂಟ ಒಂದಾಗುವ ಗ್ಯಾರಂಟಿ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದರು. ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅಶೋಕ್, ಕಾಂಗ್ರೆಸ್ ಗೆಲ್ಲಲು ಅಯೋಗ್ಯರು ಅಂತಾ ಮಮತಾ ಬ್ಯಾನರ್ಜಿಗೆ ತಿಳಿದಿದೆ ಆ ರೀತಿ ಹೇಳಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆಯೋ ಅಷ್ಟು ಸ್ಥಾನ ನಾನು ಪಶ್ಚಿಮ ಬಂಗಾಳದಲ್ಲಿ ಗೆಲ್ಲುತ್ತೇನೆ ಎಂದು ಮಮತಾ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಿಜ ಸ್ಥಿತಿಯೂ ಹಾಗೆ ಇದೆ. ಸಂಸತ್ನಲ್ಲಿ ವಿಪಕ್ಷ ನಾಯಕನಾಗುವ ಯೋಗ್ಯತೆ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದರು.
ಇಂಡಿಯಾ ಮೈತ್ರಿಕೂಟದಿಂದ ಈಗ ಒಬ್ಬೊಬ್ಬರೇ ಹೊರ ಬರುತ್ತಿದ್ದಾರೆ. ಮೈತ್ರಿಕೂಟಕ್ಕೆ ತಾಜ್ ವೆಸ್ಟೆಂಡ್ ಹೋಟೆಲ್ನ ಬಿರಿಯಾನಿಯೊಂದೇ ಗ್ಯಾರಂಟಿ. ಆದರೆ ಮೈತ್ರಿಕೂಟ ಒಂದಾಗುವ ಗ್ಯಾರಂಟಿ ಇಲ್ಲ ಅಂತಾ ಅಶೋಕ್ ವ್ಯಂಗ್ಯವಾಡಿದರು. ಕಾಂಗ್ರೆಸ್ ನಾಲಾಯಕ್ ಎಂದು ಇಂಡಿಯಾ ಮೈತ್ರಿಕೂಟದ ಪಕ್ಷವೇ ಹೇಳಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ ನಾವು ಹೇಳಬೇಕಾಗಿಲ್ಲ ಎಂದರು.