ಬೆಂಗಳೂರು: ಸಾಕಷ್ಟು ಹಗ್ಗ-ಜಗ್ಗಾಟ, ಕಾನೂನು ಹೋರಾಟ ಮಾಡಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಬರ ಪರಿಹಾರ ತರುವಲ್ಲಿ ಯಶ್ವಿಸಿ ಆಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡಿ ಕೈ ತೊಳೆದುಕೊಂಡಿದೆ. ಆದರೆ, ರಾಜ್ಯ ಸರ್ಕಾರದ ಖಾತೆಗೆ ಬಂದ ಬರ ಪರಿಹಾರ ರೈತರ ಖಾತೆಯಲ್ಲಿ ಜಮೆಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಟ್ವೀಟ್ ಮಾಡಿ, ”ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ” ಎಂದು ವ್ಯಂಗ್ಯವಾಡಿದಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ರೈತರ ಬರ ಪರಿಹಾರಕ್ಕಾಗಿ 3,454 ಕೋಟಿ ರೂಪಾಯಿ ಬಿಡುಗಡೆ ಮಾಡಿ ಒಂದು ತಿಂಗಳ ಕಳೆದರೂ, ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಅದನ್ನು ರೈತರ ಬ್ಯಾಂಕ್ ಖಾತೆಗೆ ಹಾಕದೆ ಸತಾಯಿಸುತ್ತಿದೆ. ಒಟ್ಟಿನಲ್ಲಿ ಈ ದರಿದ್ರ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ನಾಡಿನ ಅನ್ನದಾತರಿಗೆ ನೆಮ್ಮದಿಯಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“10 ಕೆಜಿ ಅಕ್ಕಿ ಬದಲು ಪ್ರತಿ ಕೆಜಿ ಅಕ್ಕಿಗೆ ₹34 ನೀಡುತ್ತೇವೆಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರು, ಅಕ್ಕಿ ಬದಲು ನೀಡುತ್ತಿದ್ದ ದುಡ್ಡನ್ನು ಕಳೆದ ಮೂರು ತಿಂಗಳಿಂದ ಬಾಕಿ ಉಳಿಸಿಕೊಂಡು ಕನ್ನಡಿಗರಿಗೆ ಪಂಗನಾಮ ಹಾಕಿದ್ದಾರೆ.”
“ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸರಿಯಾಗಿ ಜಾರಿಗೊಳಿಸಿದ ಏಕೈಕ ಗ್ಯಾರಂಟಿ ಯಾವುದಾದರೂ ಇದ್ದರೆ ಅದು ಸುಳ್ಳು ಹೇಳುವುದು, ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಏಮಾರಿಸುವ ಗ್ಯಾರಂಟಿ ಮಾತ್ರ” ಎಂದು ವಾಗ್ದಾಳಿ ಮಾಡಿದ್ದಾರೆ.
ಜಮೆಯಾಗದ ಬರ ಪರಿಹಾರ
ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಬರ ಪರಿಹಾರ ವಿತರಣೆ ಅರೆಬರೆಯಾಗಿದೆ. ತಾಂತ್ರಿಕತೆ ಸೇರಿ ನಾನಾ ಕಾರಣಕ್ಕೆ ಇನ್ನೂ ಸಾವಿರಾರು ರೈತರ ಖಾತೆಗೆ ಪರಿಹಾರ ಸಂದಾಯವಾಗಿಲ್ಲ. ಇದು ಒಂದಡೆಯಾದರೆ ಸಕಾಲಕ್ಕೆ ಮಳೆ ಬಾರದೆ ಬಿತ್ತನೆ ಮಾಡದ ರೈತರಿಗೂ ಪರಿಹಾರ ಸಂದಾಯ ಆಗದೆ ಇರುವುದು ಕೂಡ ಹಲವಾರು ರೈತರನ್ನು ಪರಿಹಾರದಿಂದ ವಂಚಿತರನ್ನಾಗಿ ಮಾಡಿದೆ.
ಇದರ ಜೊತೆಗೆದ ಪರಿಹಾರದ ಹಣವನ್ನು ಹಲವು ಬ್ಯಾಂಕ್ಗಳು ಸಾಲದ ಹಣಕ್ಕೆ ಮುರಿದುಕೊಳ್ಳುತ್ತಿರುವುದು ರೈತರನ್ನು ಕಂಗಾಲಾಗಿಸಿದೆ. ಇದರ ಜೊತೆಗೆ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಹಣ, ಉದ್ಯೋಗ ಖಾತ್ರಿ, ವಿಕಲ ಚೇತನರಿಗೆ ನೀಡುವ ಹಣವನ್ನೂ ಕೂಡ ಬ್ಯಾಂಕ್ನವರು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ.