ಪ್ರತಿನಿಧಿ ವರದಿ ಗುಂಡ್ಲುಪೇಟೆ
ಗುಂಡ್ಲುಪೇಟೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿತ್ತು ಕೆಲವು ದಿನಗಳ ಹಿಂದೆ ಪ್ರಸಿದ್ಧ ಪ್ರವಾಸಿ ಪ್ರದೇಶ ಹಿಮವದ್ ಗೋಪಾಲಸ್ವಾಮಿಬೆಟ್ಟ ವಲಯದಲ್ಲೂ ಹಲವು ದಿನಗಳಿಂದ ಮಳೆ ಸುರಿದ ಪರಿಣಾಮ ರಕ್ಷಣೆ ಪಡೆಯಲು ಪ್ರವಾಸಿಗರು ಪರದಾಡುವಂತಾಗಿತ್ತು.
ಕೆಲವು ದಿನಗಳ ಹಿಂದೆ ಬೆಟ್ಟದಿಂದ ಇಳಿಯುವ ಮಾರ್ಗದಲ್ಲಿರುವ ಕಿರು ಸೇತುವೆಗಳು ಮತ್ತು ಪ್ರಾಕೃತಿಕ ಮಾರ್ಗಗಳ ಮೂಲಕ ಹಂಗಳ ಹಿರಿಕೆರೆಗೆ ಹರಿಯಬೇಕಿದ್ದ ಮಳೆ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ರಸ್ತೆ ಮೂಲಕ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಕಡೆಗೆ ಅಪಾರ ಪ್ರಮಾಣದಲ್ಲಿ ಹರಿದು ಬಂದಿದೆ.
ಇದರಿಂದ ಚೆಕ್ ಪೋಸ್ಟ್, ಟಿಕೆಟ್ ವಿತರಣಾ ಕೇಂದ್ರ, ಕ್ಯಾಂಟೀನ್ಗಳ ಸಾಲಿನ ಮುಂದೆ ಮಳೆ ನೀರು ಕಾಲುವೆಯಂತೆ ಹರಿಯಿತು. ದೇವರ ದರ್ಶನದ ಬಳಿಕ ಸಾರಿಗೆ ಸಂಸ್ಥೆ ಬಸ್ ನಲ್ಲಿ ಬಂದಿಳಿದ ಪ್ರವಾಸಿಗರು ಮತ್ತು ಭಕ್ತರಿಗೆ ರಸ್ತೆಯೇ ಕಾಣದಂತಾಯಿತು. ಕೈಹಿಡಿದುಕೊಂಡು ಚೆಕ್ ಪೋಸ್ಟ್ ಗೇಟ್ ದಾಟಿ ಹೊರ ಬರುವಂತಾಗಿತ್ತು . ಆದರೆ, ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರವಾಸಿಗರು ಮಳೆಯಿಂದ ರಕ್ಷಣೆ ಪಡೆಯಲು ಕ್ಯಾಂಟೀನ್ಗಳ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೆರೆ-ಕಟ್ಟೆಗಳಿಗೆ ಜೀವಕಳೆ: ಪಟ್ಟಣ ಸೇರಿದಂತೆ ಜಿಲ್ಲೆಯ ಅಲ್ಲಲ್ಲಿ ನಿರಂತರವಾಗಿ ಉತ್ತಮ ಮಳೆ ಸುರಿಯುತ್ತಿದೆ ಬಂಡೀಪುರ ರಾಷ್ಟ್ರೀಯ ಉದ್ಯಾನದಂಚಿನಲ್ಲಿ ಗ್ರಾಮಗಳನ್ನು ಒಳಗೊಂಡು ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಜಲರಾಶಿಯನ್ನು ಕಂಡು ತಾಲೂಕಿನ ಜನರು ಸಂತಸ ಗೊಂಡಿದ್ದಾರೆ.
ಪಟ್ಟಣ ಸೇರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸಾಧಾರಣ,. ದೇವರಹಳ್ಳಿ, ಹಂಗಳ, ಹೊನ್ನೇಗೌಡನಹಳ್ಳಿ, ಹೊಂಗಳ್ಳಿ ಬರಗಿ, ವಡ್ಡಗೆರೆ, ಬೇಗೂರು ಮುಂತಾದ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಅಲ್ಲದೆ ದೇಶಿಪುರ ಚನ್ನಮಲ್ಲಿಪುರ, ಕಗ್ಗಳಹುಂಡಿ ಬೇರಂಬಾಡಿ, ಕಂದೇಗಾಲ, ಕಗ್ಗಳ, ಬೇಗೂರು, ತಗ್ಗಲೂರು, ಬೆಟ್ಟದಮಾದಹಳ್ಳಿ, ಹಳ್ಳದಮಾದಹಳ್ಳಿ, ರಾಘವಾಪುರ, ಜಕ್ಕಹಳ್ಳಿ ಇನ್ನೂ ಹಲವು ಗ್ರಾಮಗಳಲ್ಲಿ ಜೋರು ಮಳೆಯಾಗಿದೆ.ಬಂಡೀಪುರ ರಾಷ್ಟ್ರೀಯ ಉದ್ಯಾನದ ಮಳೆ ನೀರಿನ ಸಂಪರ್ಕ ಇರುವ ತಾಲೂಕಿನ ಬೇರಂಬಾಡಿ., ಬರಗಿ ಕೆರೆ ಹೊರತಾಗಿ ತಾಲೂಕಿನ ಎಲ್ಲಾ ಕೆರೆಗಳು ನೀರಿಲ್ಲದೇ ಭಣಗುಡುತ್ತಿದ್ದವು. ಕೆರೆಗಳಿಗೆ ನೀರು ತುಂಬಿಸುವಂತೆ ರೈತ ಸಂಘಟನೆ, ಅರಿಶಿಣ ಬೆಳೆಗಾರರ ಸಂಘ ಇತರೆ ಸಂಘಟನೆಯವರು ಪ್ರತಿಭಟನೆ ನಡೆಸಿದ್ದರು. ಆದರೆ,
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು ಮಳೆ ಶುರುವಾಗುವುದು ಮಧ್ಯಾಹ್ನದ ನಂತರ ನಿರಂತರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು.
ಕೃಷಿ ಚಟುವಟಿಕೆ ಪ್ರಾರಂಭ: ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಈಗಾಗಲೇ ಕೃಷಿ ಚಟುವಟಿಕೆ ಪ್ರಾರಂಭವಾಗಿದೆ. ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿಕೊಂಡಿದ್ದಾರೆ.
ಇಲಾಖೆಯವರು ಹುತ್ತೂರು ಕರೆಯಿಂದ ವಡ್ಡಗೆರೆ ಕೆರೆಗೆ ನೀರು ಹರಿಸಿದ್ದರು. ಈಗ ಅಪಾರ ಪ್ರಮಾಣದಲ್ಲಿ ಕರೆ-ಕಟ್ಟೆಗಳಿಗೆ ಮಳೆ ನೀರು ಹರಿದು ಬರುತ್ತಿರುವುದನ್ನು ನೋಡಿ ರೈತರು ಸಂತಸಪಡುತ್ತಿದ್ದಾರೆ. ತಾಲೂಕಿನ ಕಂದೇಗಾಲದ ಕೆರೆ ಮಳೆಗೆ ಭರ್ತಿಯಾಗಿರುವಂತೆ, ತಾಲೂಕಿನಲ್ಲಿ ಕೆರೆ ಕಟ್ಟೆಗಳು ಮೈದುಂಬಿದ್ದು, ಮಳೆನೀರು ಕೆರೆಗಳಿಗೆ ಹರಿದು ಬರುತ್ತಿದೆ. ಹೀಗಾಗಿ ಜೀವಕಳೆ ಬರುತ್ತಿದೆ.
ಗುಂಡ್ಲು ನದಿಯ ಮೂಲ ತುಂಬಿ ಹರಿಯುತ್ತಿದೆ : ತಾಲೂಕಿನ ಬತ್ತಿ ಹೋಗಿರುವ ಗುಂಡ್ಲು ನದಿ ನದಿಯ ನೀರಿನ ಮೂಲಗಳ ಪ್ರದೇಶಗಳೆಲ್ಲವೂ ಹಲವು ದಿನಗಳಿಂದ ಮಳೆಯಾಗುತ್ತಿರುವ ಕಾರಣದಿಂದ ತುಂಬಿ ಹರಿಯುತ್ತಿದೆ ಇದರಿಂದ ಗುಂಡ್ಲು ನದಿ ಉಳಿವಿಗಾಗಿ ಅಭಿಯಾನ ನಡೆಸುತ್ತಿದ್ದವರು ಸಾಮಾಜಿಕ ಜಾಲತಾಣಗಳಲ್ಲಿ ಗುಂಡ್ಲು ನದಿಯ ಮೂಲಗಳಲ್ಲಿ ಹರಿಯುತ್ತಿರುವ ನೀರಿನ ಚಿತ್ರಗಳನ್ನು ಹಾಕಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಹಲವು ಭಾಗಗಳಲ್ಲಿ ಬೆಳೆ ಹಾನಿ : ತಾಲೂಕಿನ ಗೋಪಾಲಪುರ, ಮಂಗಲ ದೇವರಹಳ್ಳಿ, ಬರಗಿ, ಹೊಂಗಳ್ಳಿ , ಚನ್ನಮಲೀಪುರ, ಕಗ್ಗಳದಹುಂಡಿ, ಮದ್ದೂರು ಇನ್ನೂ ಹಲವು ಗ್ರಾಮಗಳಲ್ಲಿ ಜೋರು ಮಳೆಯಿಂದ ಬೆಳೆಗಳಾದ ಈರುಳ್ಳಿ, ಟೊಮೆಟೊ, ಬದನೆ, ಬಾಳೆ, ಇತರೆ ಬೆಳೆಗಳ ನಡುವೆ ಇರುವ ಸಾಲುಗಳಲ್ಲಿ ಮಳೆ ನೀರು ಕೆರೆಯಂತೆ ನಿಲ್ಲುತ್ತಿವೆ. ಇನ್ನೂ ಇತ್ತೀಚೆಗೆ ಬಿತ್ತನೆ ಮಾಡಿದ ಸೂರ್ಯಕಾಂತಿ, ಜೋಳ, ನೆಲಗಡಲೆ ಇತರೆ ಬೆಳೆಗಳ ಫೈರುಗಳು ನೀರಿನಲ್ಲಿ ಮುಳುಗುತ್ತಿವೆ. ತಗ್ಗುಗಳಲ್ಲಿ ಇರುವ ಜಮೀನುಗಳಿಂದ ಮಳೆ ನೀರು ಹಳ್ಳದ ಕಡೆಗೆ ಕಿರುಜಲಪಾತದ ಮಾದರಿಯಲ್ಲಿ ಹರಿದು ಹೋಗುತ್ತಿದೆ. ದಶಕದಿಂದ ಸಮರ್ಪಕವಾಗಿ ಮಳೆಯಾಗದ ಕಾರಣ ಕೆರೆ-ಕಟ್ಟೆಗಳ ಸಂಪರ್ಕ ಕಾಲುವೆಗಳು ಮುಚ್ಚಿಹೋಗಿರುವ ಕಾರಣ ಮಳೆ ನೀರು ಜಮೀನುಗಳು ಮತ್ತು ಮನೆಗಳಿಗೆ ನುಗ್ಗುತ್ತಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಮೂರು ಕೆಲವು ದಿನಗಳ ಹಿಂದೆ ಬರಗಿ ಹೊಂಗಳ್ಳಿ ರಸ್ತೆಯ ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದ್ದ ಕಾರಣ ಸಂಪರ್ಕ ಕಡಿತವಾಗಿತ್ತು.
ಕೊಟ್
ಹಲವು ದಿನಗಳಿಂದ ಮಳೆಬಾರದೇ ಬೇಸರವನ್ನು ಉಂಟು ಮಾಡಿತ್ತು ಆದರೆ ಈಗ ಸುರಿಯುತ್ತಿರುವ ಮಳೆ ಕೆರೆಕಟ್ಟೆಗಳನ್ನು ತುಂಬಿಸುತ್ತಿರುವುದು ಸಂತಸವನ್ನು ಉಂಟು ಮಾಡಿದೆ.
-ನಾಗೇಂದ್ರ, ಸ್ಥಳೀಯರು
ಮಳೆಯಾಗುತ್ತಿರುವುದು ಸಂತಸವನ್ನು ಉಂಟು ಮಾಡಿದೆ ಗುಂಡ್ಲುಪೇಟೆಯ ಮೂಲ ಗುಂಡ್ಲು ನದಿ ಮತ್ತೊಮ್ಮೆ ಅರಿವು ಕಾಣುತ್ತಿರುವುದು ಮತ್ತಷ್ಟು ಸಂತಸವನ್ನು ಇಮ್ಮಡಿಗೊಳಿಸಿದೆ
– ಮದುಕಿರಣ್, ಸ್ಥಳೀಯ
ಗುಂಡ್ಲುಪೇಟೆ ತಾಲೂಕಿನ ಧಾರ್ಮಿಕ ಕ್ಷೇತ್ರ ಪಾರ್ವತಮ್ಮನವರ ಬೆಟ್ಟದ ಬಳಿ ಧರೆಗೆ ಇಳಿದ ಜರಿ
ಹಾಲಳ್ಳಿ ಬಳಿ ಗುಂಡ್ಲು ನದಿಗೆ ಅಡ್ಡಲಾಗಿ ಕಟ್ಟಿರುವ ಚೆಕ್ ಡ್ಯಾಂ
ವಡಗಟ್ಟೆ ಕೆರೆ ತುಂಬಿ ಕೋಡಿ ಬಿದ್ದು ಮಲ್ಲಯ್ಯನಪುರ ಕೆರೆಗೆ ನೀರು ಅರಿಯುತ್ತಿರುವುದು
ಪಟ್ಟಣದ ಮಡಹಳ್ಳಿ ರಸ್ತೆಯಲ್ಲಿ ನಿರಂತರ ಮಳೆಯಿಂದ ನೀರು ನಿಂತು ಸ್ಲ್ಯಾಬ್ ಕುಸಿದಿರುವುದು
ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ನಿಲ್ದಾಣದಲ್ಲಿ ಮಳೆಯಿಂದ ನೀರು ನಿಲ್ಲುವಂತಿರುವುದು