ಮಂಡ್ಯ : ತಮಿಳುನಾಡಿಗೆ ನೀರು ಬಿಡದಂತೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದರು ನಡೆಯುತ್ತಿರುವ ಧರಣಿ ಸತ್ಯಾಗ್ರಹ ೨೯ನೇ ದಿನಕ್ಕೆ ಕಾಲಿಟ್ಟಿದೆ. ಪಟಾಪಟಿ ಚಡ್ಡಿ, ಎಣ್ಣೆ ಬಾಟಲ್ ಹಿಡಿದು ಕನ್ನಡಸೇನೆ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ರಾಜ್ಯಕ್ಕೆ ಒಂದು ನ್ಯಾಯ, ತಮಿಳುನಾಡಿಗೆ ಮತ್ತೊಂದು ನ್ಯಾಯದಾನ ನೀಡುತ್ತಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸಮಿತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದರು. ರಾಜ್ಯ ಸರ್ಕಾರದ ಮಂತ್ರಿಗಳಿಗೆ ಚಡ್ಡಿಯ ಚಿಂತೆ. ಇರ್ವಿನ್ ನಾಲಾ ಚಳವಳಿ, ವರುಣಾ ಚಳವಳಿಯಲ್ಲಿ ಮಂಡ್ಯದ ರೈತರು ಚಡ್ಡಿ ಧರಿಸಿಯೇ ಹೋರಾಟ ಮಾಡಿ ನ್ಯಾಯ ಪಡೆದರು. ಇಂತಹ ಚಡ್ಡಿಯ ಬಗ್ಗೆ ಸಚಿವರು ಮಾತನಾಡುವುದನ್ನು ಬಿಟ್ಟು ಆಡಳಿತಾತ್ಮಕ ವಿಚಾರಗಳತ್ತ ಗಮನ ಹರಿಸಿ, ಮೊದಲು ರೈತರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸುವತ್ತ ಚಿಂತನೆ ನಡೆಸಬೇಕು. ಚಡ್ಡಿಯ ಬಗ್ಗೆ ಮಾತನಾಡುವವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.