ಪ್ರತಿನಿಧಿ ವರದಿ ಮಡಿಕೇರಿ
ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ನೇತೃತ್ವದಲ್ಲೇ ಜಿಲ್ಲಾ ಸಮಿತಿ ಮುಂದುವರಿಯಲಿದೆ. ಮನು ಸೋಮಯ್ಯ ಸೇರಿದಂತೆ ಕೆಲವರನ್ನು ಪದಚ್ಯುತಗೊಳಿಸಿರುವ ರಾಜ್ಯ ಪದಾಧಿಕಾರಿಗಳ ಕ್ರಮ ಖಂಡನೀಯವೆಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ 5 ತಾಲೂಕು ರೈತ ಸಂಘಟನೆಗಳು ಮನು ಸೋಮಯ್ಯ ಅವರ ನೇತೃತ್ವದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ಹೆಸರಿನಲ್ಲಿ ಮುನ್ನಡೆಯಲು ನಿರ್ಣಯ ಕೈಗೊಂಡಿವೆ ಎಂದರು.
ಮನು ಸೋಮಯ್ಯ ಅವರ ಬೆಳವಣಿಗೆ ಮತ್ತು ಹೋರಾಟವನ್ನು ಸಹಿಸದೆ ರೈತ ಸಂಘದ ಕೆಲವು ರಾಜ್ಯ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರ ಸಹಿತ ಕೆಲವು ಪದಾಧಿಕಾರಿಗಳನ್ನು ಪದಚ್ಯುತಿಗೊಳಿಸಿದ್ದಾರೆ. ರೈತ ಸಂಘದ ರಾಜ್ಯ ಪದಾಧಿಕಾರಿಗಳ ಅವಧಿ ಮುಗಿದಿದ್ದರೂ ಅಧಿಕಾರದಲ್ಲಿ ಮುಂದುವರೆಯುವ ಮೂಲಕ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜು.23ರಂದು ಕೊಡಗು ಜಿಲ್ಲೆಯ ಸಮಿತಿಗಳ ಸಭೆ ನಡೆಸಿ ರಾಜ್ಯ ಸಮಿತಿಯ ನಿರ್ಧಾರವನ್ನು ಖಂಡಿಸಲಾಗಿದೆ. ಅಲ್ಲದೆ ಮನು ಸೋಮಯ್ಯ ಅವರ ಮುಂದಾಳತ್ವದಲ್ಲಿ ಜಿಲ್ಲಾ ಸಮಿತಿಯನ್ನು ಪುನರಾಯ್ಕೆ ಮಾಡಲಾಗಿದೆ. ಈ ನಿರ್ಣಯವನ್ನು ರಾಜ್ಯ ಸಂಘಕ್ಕೂ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.
ಪ್ರಮುಖರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ತಾಲೂಕು ಅಧ್ಯಕ್ಷ ಅಲೆಮಾಡ ಮಂಜುನಾಥ್, ಸೋಮವಾರಪೇಟೆ ಸಂಚಾಲಕ ಎ.ಆರ್.ಕುಶಾಲಪ್ಪ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಹಾಗೂ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಉಪಸ್ಥಿತರಿದ್ದರು.