ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೈತ್ರಿ ಪರ್ವ ಶುರುವಾಗಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದಾರೆ. ಸುಮಾರು ಅರ್ಧಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನವೇ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಬಲಗೊಳ್ಳಲಿದೆ. ರಾಜ್ ಠಾಕ್ರೆ ಅವರ ಪಕ್ಷ ಎಂ.ಎನ್.ಎಸ್ ಎನ್.ಡಿ.ಎ ಸೇರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ರಾಜ್ ಠಾಕ್ರೆ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾದರು.
ಕಳೆದ ನಾಲ್ಕು ದಿನಗಳಲ್ಲಿ ದೆಹಲಿಗೆ ಠಾಕ್ರೆ ಅವರ ಎರಡನೇ ಭೇಟಿ ಇದಾಗಿದೆ. ಏಕನಾಥ್ ಶಿಂಧೆಯವರ ಶಿವಸೇನೆಗೆ ಬಿಜೆಪಿ ನಿರೀಕ್ಷಿಸಿದಷ್ಟು ಬೆಂಬಲ ಸಿಗುತ್ತಿಲ್ಲ. ರಾಜ್ ಠಾಕ್ರೆ ಅವರ ಪಕ್ಷವು ಮುಂಬೈ, ಕೊಂಕಣ, ಪುಣೆ, ನಾಸಿಕ್ನಂತಹ ಪ್ರದೇಶಗಳಲ್ಲಿ ಪ್ರಬಲವಾಗಿದ್ದು ಎನ್.ಡಿ.ಎ ಲಾಭವಾಗಬಹುದು ಎನ್ನುವ ಭರವಸೆ ಇದೆ.
ಅಮಿತ್ ಶಾ ಅವರೊಂದಿಗಿನ ರಾಜ್ ಠಾಕ್ರೆ ಅವರ ಈ ಸಭೆಯು ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯನ್ನು ಬಲಪಡಿಸಲು ರಾಜ್ ಠಾಕ್ರೆ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಸಿದ್ಧವಾಗಿದೆ ಎಂಬುದರ ಸೂಚನೆಯಾಗಿದೆ.