ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ದಿನ ನಾನು ಸ್ಥಳಕ್ಕೆ ಹೋಗಿದ್ದೆ. ರಾಮೇಶ್ವರಂ ಕೆಫೆಯವರು 12 ಕಡೆ ಹೊಟೇಲ್ ಪ್ರಾರಂಭ ಮಾಡಿದ್ದಾರೆ. ಉದ್ಯಮದಲ್ಲಿ ಬೆಳವಣಿಗೆಯಾಗುತ್ತಿರುವುದನ್ನು ಸಹಿಸಲಾಗದವರು ಈ ರೀತಿ ಮಾಡಿರಬಹುದು ಅಂತ ಅಲ್ಲಿನ ಜನ ಹೇಳ್ಳುತ್ತಿದ್ದರು. ಇದಲ್ಲದೆ ಲೋಕಸಭೆ ಚುನಾವಣೆ ಸಮಯದಲ್ಲಿ ಯಾವುದಾದರೂ ಸಂಘಟನೆ ಬೆಂಗಳೂರನ್ನು ಅನ್ಸೇಫ್ ನಗರ ಮಾಡಬೇಕು ಅಂತ, ನಗರಕ್ಕೆ ಹೆಚ್ಚಿನ ಹೂಡಿಕೆ ಹರಿದು ಬರುತ್ತಿದ್ದು, ಈ ಸಮಯದಲ್ಲಿ ಹೀಗೆ ಮಾಡಿದರೆ ಬಂಡವಾಳ ಹಾಕುವವರು ಬರುವುದಿಲ್ಲ ಅಂತ ಹೀಗೆ ಮಾಡಿರಬಹುದು. ಅಥವಾ ಬೇರೆ ಯಾವುದೋ ಕಾರಣ ಇರಬಹುದು. ಒಟ್ಟಿನಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಎಷ್ಟೇ ಕಷ್ಟವಾದರೂ ಪ್ರಕರಣ ಬೇಧಿಸುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಪ್ರಕರಣದ ತನಿಖೆ ಈಗಾಗಲೆ ಎಂಡು ತಂಡಗಳನ್ನು ರಚನೆ ಮಾಡಿದ್ದೇವೆ. ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಅಲ್ಲದೆ ಎನ್ಐಎ ಮತ್ತು ಎನ್ಎಸ್ಜಿ ತಂಡದವರೂ ತನಿಖೆ ನಡೆಸುತ್ತಿದ್ದಾರೆ. ಕೆಲವು ಮಾಹಿತಿಗಳು ನಮಗೆ ಲಭ್ಯವಾಗಿವೆ. ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ. ಎಫ್ಎಸ್ಎಲ್ನವರು ಈಗಾಗಲೇ ಮಾದರಿಗಳನ್ನು ಸಂಗ್ರಹಿಸಿ ಟೆಕ್ನಿಕಲ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ಫೋಟಿಸಿದ ವ್ಯಕ್ತಿಯ ಮಾಹಿತಿ ಸಿಕ್ಕಿದೆ. ವ್ಯಕ್ತಿಯನ್ನು ಆದಷ್ಟು ಬೇಗ ಹಿಡಿಯುತ್ತೇವೆ ಎಂದು ಭರವಸೆ ನೀಡಿದರು.