ಬೊಂಬೆನಾಡು ಚನ್ನಪಟ್ಟಣ..!
ಸದ್ಯ ರಾಜ್ಯ ರಾಜಕೀಯದ ಹಾಟ್ ಸ್ಪಾಟ್..! ಇಲ್ಲಿ ಘೋಷಣೆ ಆಗಿರೋ ಬೈ ಎಲೆಕ್ಷನ್ ಕಾವು ಎಷ್ಟರಮಟ್ಟಿಗೆ ಇದೆ ಅಂದ್ರೆ ಆಡೋ ಮಕ್ಕಳಿಂದ.. ಅಡ್ಡಾಡೋಕೆ ಆಗದ ಮುದುಕರವರೆಗೂ ಪಾಲಿಟಿಕ್ಸ್ ಮಾತಾಡ್ತಿದ್ದಾರೆ. ಸ್ನೇಹಿತರಾಗಿದ್ದ ಯುವಕರು ಇದೆ ಬೈ ಎಲೆಕ್ಷನ್ ನಿಂದ ಎಣ್ಣೆ ಸಿಗೇಕಾಯಿ ಥರ ಆಗೋಗಿದ್ದಾರೆ. ಅಬ್ಬಾ.. ಇಲ್ಲಿನ ಜನರ ಕಣಕಣದಲ್ಲೂ ರಾಜಕೀಯ ಬೆರೆತು ಹೋಗಿ ಜಗಲಿ ಕಟ್ಟೆ.. ಹೋಟೆಲ್.. ಟೀ ಅಂಗಡಿ ಎಲ್ಲಾಕಡೆಯೂ ಬರೀ ರಾಜಕೀಯದ ಚರ್ಚೆಯೇ ಆಗಿದೆ.
ಯೆಸ್.. ಬೊಂಬೆನಾಡು ಚನ್ನಪಟ್ಟಣದ ರಣರಣ ಪಾಲಿಟಿಕ್ಸ್ ರಂಗೇರುತ್ತಿದೆ.ಉಪಚುನಾವಣೆ ಪ್ರತಿಷ್ಠೆಯ ಕಿಡಿಯ ಕಾವು ಜೋರಾಗುತ್ತಿದ್ದು, ಪ್ರತಿಷ್ಠಿತ ಚನ್ನಪಟ್ಟಣದ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ಅಭ್ಯರ್ಥಿ ಹುಡುಕಾಟದಲ್ಲಿ ತುಂಬಾನೇ ತಲೆ ಕೆಡಿಸಿಕೊಂಡಿವೆ.
ಇಲ್ಲಿ ಮೈತ್ರಿ ಅಭ್ಯರ್ಥಿ ಆಯ್ಕೆಯೇ ದೊಡ್ಡ ಸವಾಲಾಗಿದೆ. ಈ ನಡುವೆ ಸಿಪಿ ಯೋಗೇಶ್ವರ್ ಬಂಡಾಯ ಮೈತ್ರಿ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಂಎಲ್ ಎ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿರೋ ಕಾರಣ ಸೈನಿಕ ರೆಬೆಲ್ ಆಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಈಗಾಗ್ಲೇ ಖಾಸಗಿ ರೆಸಾರ್ಟ್ನಲ್ಲಿ ಬಿಜೆಪಿ ಮುಖಂಡರು, ತಮ್ಮ ಕಾರ್ಯಕರ್ತರ ಸಭೆ ನಡೆಸಿದ್ದು, ಕುಮಾರಸ್ವಾಮಿ ಹಾಗೂ ಬಿಜೆಪಿ ಪ್ರಮುಖ ನಾಯಕರಿಗೆ ಯೋಗೇಶ್ವರ್ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ.
ಯೋಗೇಶ್ವರ್ ಬಿಜೆಪಿ ಕೇಂದ್ರ ವರಿಷ್ಠರ ಕಿವಿ ಮಾತಿನ ನಡುವೆಯೂ ತಮ್ಮ ಬೆಂಬಲಿಗರ ಜತೆ ಸಭೆ ನಡೆಸಿ ಎಲೆಕ್ಷನ್ ಅಖಾಡವನ್ನ ಕಲರ್ ಫುಲ್ ಮಾಡಿದ್ದಾರೆ. ಕುಮಾರಸ್ವಾಮಿ ಹಾಗೂ ಕೇಸರಿ ನಾಯಕರ ವಿರುದ್ಧ ಸೈನಿಕ ಬಂಡಾಯದ ಕಹಳೆ ಊದಿದ್ದಾರೆ. ಒಂದು ವೇಳೆ ಟಿಕೆಟ್ ಮಿಸ್ ಆದ್ರೂ ಸಹ ಸೈನಿಕನ ಸ್ಪರ್ಧೆ ಕನ್ಫರ್ಮ್ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದಾಗಿ ಯೋಗೇಶ್ವರ್ ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಹೇಳಿಕೆಗಳ ವಿರುದ್ಧ ಯೋಗೇಶ್ವರ್ ಸಿಟಿದೆದ್ದಿದ್ದು, ಶತಾಯ-ಗತಾಯ
ಸ್ಪರ್ಧೆ ಖಚಿತ ಎಂಬ ಸ್ಪಷ್ಟ ಸಂದೇಶವನ್ನ ಸಾರಿದ್ದಾರೆ.ಬಿಜೆಪಿ ನಾಯಕರು
ಯೋಗೇಶ್ವರ್ಗೆ ಟಿಕೆಟ್ ಬೇಕು ಎಂದು ಶಿಫಾರಸು ಮಾಡಿದ್ದರೂ, ಕುಮಾರಸ್ವಾಮಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಹುತೇಕ ಚನ್ನಪಟ್ಟಣದ ಟಿಕೆಟ್ ಜೆಡಿಎಸ್ ತೆಕ್ಕೆಗೆ ಬಹುತೇಕ ಕನ್ಫರ್ಮ್ ಆಗಿದ್ದು, ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿ ಆಗ್ತಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ.ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ಗೆ ಟಿಕೆಟ್ ಬಿಟ್ಟುಕೊಟ್ಟರೆ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಕಷ್ಟ ಎಂದು ಜಿಲ್ಲಾ ಬಿಜೆಪಿ ಘಟಕ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ಹಳೆ ಮೈಸೂರು ಭಾಗದಲ್ಲಿ ಅಷ್ಟೇನು ವರ್ಚಸ್ಸು ಹೊಂದದ ಬಿಜೆಪಿ ,ಚನ್ನಪಟ್ಟಣ ವನ್ನೂ ಬಿಟ್ಟುಕೊಟ್ಟರೆ ಮುಂದಿನ ದಿನಗಳಲ್ಲಿ ಹಿಡಿತ ಸಾಧಿಸುವುದು ಕಷ್ಟ ಎಂಬ ಮಾತಿಗಳನ್ನ ಯೋಗೇಶ್ವರ್ ವರಿಷ್ಠರಿಗೆ ಮುಟ್ಟಿಸಿದ್ದಾರೆ. ಇಷ್ಟಾಗಿಯೂ ಕುಮಾರಸ್ವಾಮಿ ನಿರ್ಧಾರದ ಪರ ಕೇಸರಿ ನಾಯಕರಿಗೆ ಒಲವಿದ್ದು, ಹೆಚ್ಡಿಕೆ ನಿರ್ಧಾರವೇ ಅಂತಿಮ ಎಂಬ ವರಿಷ್ಠರ ಖಡಕ್ ಮಾತು ಯೋಗೇಶ್ವರ್ ನಿದ್ದೆಗೆಡಿಸಿದೆ.
ಸೈನಿಕ 100% ಸ್ಪರ್ಧೆ ಮಾಡೋದು ಫಿಕ್ಸ್ ಆಗಿದೆ. ಆದ್ರೆ, ಮೈತ್ರಿ ನಾಯಕರು ಈ ಬಗ್ಗೆ ಯಾವ ರೀತಿಯಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ತಾರೆ ಅನ್ನೋದೆ ಸದ್ಯದ ಸಸ್ಪೆನ್ಸ್ ಆಗಿದೆ.
ಮತ್ತೊಂದೆಡೆ ಕಾಂಗ್ರೆಸ್ ನಲ್ಲಿ ಡಿಕೆ ಸುರೇಶ್ ಸ್ಪರ್ಧೆ ಫಿಕ್ಸ್ ಎಂದು ಹೇಳಲಾಗುತ್ತಿದೆ. ಎಂಪಿ ಎಲೆಕ್ಷನ್ ನಲ್ಕಿ ಸೋತು ಸುಣ್ಣವಾಗಿರೋ ಡಿಕೆ ಬ್ರದರ್ಸ್ ಮತ್ತೊಮ್ಮೆ ಅಧಿಪತ್ಯ ಸಾಧಿಸಲು ಬೈ ಎಲೆಕ್ಷನ್ ಅಖಾಡವನ್ನ ಬಳಸಿಕೊಳ್ತಿದ್ದಾರೆ ಎನ್ನಲಾಗುತ್ತಿದೆ. ತಮ್ಮನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದು ಸಿಎಂ ಕುರ್ಚಿಗೆ ಮತ್ತೊಂದು ಅಪ್ಲಿಕೇಶನ್ ಹಾಕೋಕೆ ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ ತೇಜಸ್ವಿನಿ ಗೌಡ ಸೇರಿದಂತೆ ಅನೇಕ ಹೊಸಬರು ಸ್ಪರ್ಧೆ ಮಾಡೋಕೆ ಉತ್ಸುಕರಾಗಿದ್ದು, ಸದ್ಯ ಕೈ ನಾಯಕರು ಕಾದು ನೋಡುವ ತಂತ್ರ ಅನುಸರಿಸಿದೆ. ಎಲ್ಲಾ ಪ್ರಶ್ನೆಗಳಿಗೂ ಶೀಘ್ರ ಉತ್ತರ ಸಿಗಲಿದ್ದು , ಬೊಂಬೆನಾಡಲ್ಲಿ ಯಾರು ಬಾಸ್ ಆಗ್ತಾರೆ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.