*ತಾಲೂಕಿನ ಗಳಿಗೆಕೆರೆ ಗ್ರಾಮದ ಇತಿಹಾಸ ಪ್ರಸಿದ್ದವಾದ ದೇವಲಾಯಕ್ಕೆ ಮುಗಿ ಬಿದ್ದ ಭಕ್ತರು
ಪ್ರತಿನಿಧಿ ವರದಿ ಕೆ.ಆರ್.ನಗರ
ತಾಲೂಕಿನ ಗಳಿಗೆಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಪಟ್ಟಲದಮ್ಮ ದೇವಿಯ ರಥೋತ್ಸ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನ, ಅಭಿಷೇಕ ಇನ್ನಿತರ ಪೂಜೆಗಳನ್ನು ಸಲ್ಲಿಸಿದರು. ದೇವರಿಗೆ ಪೂಜೆ ಸಲ್ಲಿಸಿದ ನಂತರ ದೇವಾಲಯದಿಂದ ತಂದು ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದ್ದ ರಥದ ಸುತ್ತಾ ಪ್ರದಕ್ಷಣೆ ಹಾಕಿಸಿ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಸ್ಥಳೀಯರ ಜತೆಗೆ ಅಕ್ಕಪಕ್ಕದ ಗ್ರಾಮಗಳು ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಜಯ ಘೋಷಣೆಗಳನ್ನು ಕೂಗುತ್ತಾ, ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ರಥವನ್ನು ಗ್ರಾಮದ ಹೊರ ವಲಯದಲ್ಲಿರುವ ತೋಪಿನ ಸುತ್ತಾ ಎಳೆದು ತಂದು ನಿಲ್ಲಿಸಿದರು.
ಭಕ್ತರು ರಥವನ್ನು ಎಳೆಯುತ್ತಾ ಭಾರಿ ಘೋಷಣೆಯೊಂದಿಗೆ ಮೊಳಗಿಸಿದ ಜೈಕಾರ ಮುಗಿಲು ಮುಟ್ಟಿತ್ತು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳು, ನವಜೋಡಿಗಳು, ಯುವಕರು, ಯುವತಿಯರು ಹಾಗೂ ಪ್ರವಾಸಿಗರು ಹಣ್ಣು ಧವನವನ್ನು ರಥದ ಮೇಲೆ ಎಸೆದು ಕೃತಾರ್ಥರಾದರು. ಹಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ದೇವರಿಗೆ ಪ್ರದಕ್ಷಿಣೆ ಹಾಕಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಶ್ರೀ ಪಟ್ಟಲದಮ್ಮ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿದರು.
ನೂರಾರು ವರ್ಷಗಳ ಇತಿಹಾಸ ಇರುವ ಪಟ್ಟಲದಮ್ಮ ದೇವಿ ತಾಲೂಕಿನ ಗಳಿಗೆಕೆರೆ, ದೊಡ್ಡಕೊಪ್ಪಲು, ಕಲ್ಯಾಣಪುರ, ಕಾರ್ಗಳ್ಳಿ ಕೊಪ್ಪಲು, ಅಡಗೂರು ಗ್ರಾಮಗಳಿಗೆ ಗ್ರಾಮದೇವತೆಯಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಈ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಪ್ರಸಾದ, ಮಜ್ಜಿಗೆ ವಿತರಿಸಲಾಯಿತು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಪಂ ಮಾಜಿ ಸದಸ್ಯ ಅಮಿತ್ ವಿ.ದೇವರಹಟ್ಟಿ, ಸಂತೋಷ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ತೋಟಪ್ಪನಾಯಕ, ಯಜಮಾನರಾದ ಜಿ.ಜೆ.ಮಹದೇವ್, ರಮೇಶ್ನಾಯಕ, ಬೈರಪ್ಪ, ದೊಡ್ಡಕೊಪ್ಪಲು ರಾಜೇಗೌಡ, ಅಡಗೂರು ಸುರೇಶ್, ನಾಗೇಶ್, ಕೆಂಪೇಗೌಡ, ನಾಗರಾಜು, ಕಲ್ಯಾಣಪುರ ಶಿವಣ್ಣ, ಅಡಗೂರು ಗ್ರಾ.ಪಂ ಅಧ್ಯಕ್ಷ ಮಹದೇವ್, ಉಪಾಧ್ಯಕ್ಷೆ ಸುಮಿತ್ರ ಕುಮಾರಸ್ವಾಮಿ, ಗಳಿಗೆಕೆರೆ ಸದಸ್ಯರಾದ ರಾಜನಾಯಕ, ಶ್ವೇತಭೈರನಾಯಕ, ದೊಡ್ಡಕೊಪ್ಪಲು ಸದಸ್ಯರಾದ ಶಿವ ರಾಜಮ್ಮ, ಮಧು, ಮಂಜುನಾಥ, ಮಾರಗೌಡನಹಳ್ಳಿ ಸದಸ್ಯರಾದ ಸುನೀತ, ಎಂ.ಟಿ. ರಾಜೇಶ್, ನಿಂಗರಾಜು, ಅಡಗೂರು ಸದಸ್ಯರಾದ ಕುಮಾರಿಮಹೇಶ್, ಪುವನಹಳ್ಳಿ ವೆಂಕಟರಾಮ್ ಇತರರು ಇದ್ದರು.
ಮಂಗಳವಾರ ತೆಪ್ಪೋತ್ಸವ:
ಶನಿವಾರ ಗಳಿಗೆಕೆರೆಯಲ್ಲಿ, ಭಾನುವಾರ ದೊಡ್ಡಕೊಪ್ಪಲು, ಕಾರ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ, ಸೊಮವಾರ ಕಲ್ಯಾಣಪುರ ಗ್ರಾಮದಲ್ಲಿ ದೇವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಮಂಗಳವಾರ ರಾತ್ರಿ ಕಾವೇರಿ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದ್ದು, ಬುಧವಾರ ಅಡಗೂರು ಗ್ರಾಮದಲ್ಲಿ ದೇವಿಯ ಉತ್ಸವ ಮೂರ್ತಿ ನೆರವೇರಲಿದೆ.
ಕೋಟ್:
ತಲೆ ತಲಾಂತರಗಳಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಶ್ರೀ ಪಟ್ಟಲದಮ್ಮ ದೇವಿಯ ರಥೋತ್ಸ ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತದೆ. ನಾಡಿನಲ್ಲಿ ಸಮೃದ್ದಿಯಾಗಿ ಮಳೆ, ಬೆಳೆಯಾಗಿ ಎಲ್ಲರೂ ಸಂತೋಷದಿಂದಿರಲಿ ಎಂದು ಪ್ರಾರ್ಥಿಸಿದ್ದೇವೆ. ಈ ಭಾಗದಲ್ಲಿ ಅಮೃತೇಶ್ವರ, ಮಾರಮ್ಮ ಸೇರಿದಂತೆ ಹಲವು ದೇವಾಲಯಗಳಿದ್ದು ಎಲ್ಲರಿಗೂ ಒಳ್ಳೆಯದಾಗುತ್ತಿದೆ.
-ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ
29 ಕೆಆರ್ಎನ್-1,2:- ಕೆ.ಆರ್.ನಗರ ತಾಲೂಕಿನ ಗಳಿಗೆಕೆರೆ ಗ್ರಾಮದಲ್ಲಿ ನಡೆದ ಶ್ರೀ ಪಟ್ಟಲದಮ್ಮ ದೇವಿಯ ರಥೋತ್ಸವ.
29 ಕೆಆರ್ಎನ್-3:- ಗಳಿಗೆಕೆರೆ ಗ್ರಾಮದ ಗರ್ಭಗುಡಿಯಲ್ಲಿರುವ ದೇವಿಯ ಉತ್ಸವ ಮೂರ್ತಿ.
29 ಕೆಆರ್ಎನ್-4:- ಗಳಿಗೆಕೆರೆ ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಪ್ರಸಾದ, ಮಂಜಿಗೆ ವಿತರಿಸಲಾಯಿತು.