– ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ.ಪ್ರೀತಿ ಶುಭಚಂದ್ರ
– ನಡೆ ನುಡಿಯ ಹಾದಿ ಪುಸ್ತಕ ಬಿಡುಗಡೆ ಸಮಾರಂಭ
ಪ್ರತಿನಿಧಿ ವರದಿ ಮೈಸೂರು
ಮಹಿಳೆಯರಿಗೆ ದೊರೆಯಬೇಕಾದ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿರುವ ರತಿರಾವ್ ಅವರು, ಸಾಕಷ್ಟು ಮಂದಿಗೆ ಸ್ಫೂರ್ತಿ ಮತ್ತು ಪ್ರೇರಣಾ ಶಕ್ತಿಯಾಗಿ ರೂಪುಗೊಂಡಿದ್ದಾರೆ ಎಂದು ಮೈಸೂರು ವಿವಿಯ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ.ಪ್ರೀತಿ ಶುಭಚಂದ್ರ ಹೇಳಿದ್ದಾರೆ.
ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಪ್ರಗತಿಪರ ಸಂಘಟನೆಗಳು ಹಾಗೂ ಅಪರಾಜಿತೆ ಪ್ರಕಾಶನ ಸಂಸ್ಥೆಯಿಂದ ಶನಿವಾರ ರಂಗಾಯಣದ ಶ್ರೀರಂಗದಲ್ಲಿ ಹೋರಾಟಗಾರ್ತಿ ಡಾ. ರತಿರಾವ್ ಅವರ ಜೀವನ, ಬದುಕು, ಹೋರಾಟ ಹಾಗೂ ಸೈದ್ಧಾಂತಿಕ ನೆಲೆಗಳನ್ನು ಗುರುತಿಸುವ `ನಡೆ ನುಡಿಯ ಹಾದಿ’ ಪುಸ್ತಕ ಕುರಿತು ಅವರು ಮಾತನಾಡಿದರು.
ಸಮತಾ ವೇದಿಕೆ ಸ್ಥಾಪಕರಾಗಿ ಡಾ.ರತಿರಾವ್ ಕಳೆದ 50 ವರ್ಷಗಳಿಂದ ಮಾಡಿರುವ ಮಹಿಳಾ ಹೋರಾಟಗಳ ಸಚಿತ್ರಣವುಳ್ಳ ಪುಸ್ತಕವೇ ನಡೆ ನುಡಿಯ ಹಾದಿಯಾಗಿದೆ. ಪುಸ್ತಕದ ಶೀರ್ಷಿಕೆ ಗಮನಾರ್ಹ ಹಾಗೂ ಮಹತ್ವಪೂರ್ಣವೂ ಆಗಿದೆ. ಸಾಂಸ್ಕೃತಿಕ ನಾಯಕ ಬಸವಣ್ಣನವರ ವಚನಗಳಲ್ಲೂ ನಡೆ ನುಡಿಯ ಸಾಮರಸ್ಯ ಪ್ರಮುಖ ತತ್ವವಾಗಿದೆ. ಇಂತಹ ಶೀರ್ಷಿಕೆಯ ಪುಸ್ತಕ ರತಿರಾವ್ ಅವರ ಹೋರಾಟದ ಪೂರ್ಣ ಚಿತ್ರಣವನ್ನು ಕಟ್ಟಿಕೊಟ್ಟಿದೆ. ನೊಂದ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಹೋರಾಟಗಾರ್ತಿ ರತಿರಾವ್ ಮಾಡಿರುವ ಹೋರಾಟ ಹಾಗೂ ತುರ್ತು ಸ್ಪಂದನೆ ಸ್ಮರಣೀಯವಾಗಿದೆ ಎಂದರು.
ಮಹಿಳೆಗೆ ಸಾಂವಿಧಾನಿಕವಾಗಿ ಸಿಗಬೇಕಾದ ಹಕ್ಕುಗಳು, ಸೌಲಭ್ಯ, ರಕ್ಷಣೆಯನ್ನು, ನ್ಯಾಯಯುತವಾಗಿ ಪ್ರಾಮಾಣಿಕತೆಯಿಂದ ದೊರೆಯುವಂತೆ ಮಾಡಬೇಕಿದೆ. ರಾಜಕೀಯ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳ ಜೊತೆಗೆ ಕೌಟುಂಬಿಕ ವಲಯಗಳಲ್ಲಿ ಅದೃಶ್ಯಗೊಳಿಸಿ ಪಕ್ಕಕ್ಕೆ ತಳ್ಳಿರುವ ಮಹಿಳೆಯರನ್ನು ಬೇಷರತ್ತಾಗಿ ಒಳಗೊಳ್ಳುವಂತೆ ಮಾಡುತ್ತಾ ಬಂದಿರುವ ಮಹಿಳಾ ಹೋರಾಟಗಳಲ್ಲಿ ರತಿರಾವ್ ನಿರ್ವಹಿಸಿದ ಪಾತ್ರ ಬಹುಮುಖ್ಯ. ಈ ಹೋರಾಟದ ಮೂಲಕ ರತಿರಾವ್ ಅವರು ಸಾಕಷ್ಟು ಮಂದಿಗೆ ಸ್ಫೂರ್ತಿ ಮತ್ತು ಪ್ರೇರಣಾ ಶಕ್ತಿಯಾಗಿ ರೂಪುಗೊಂಡಿದ್ದಾರೆ. ರತಿರಾವ್ ಅವರ ಹೋರಾಟದ ಪ್ರತಿ ಅಂಶಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಮತಾ ವೇದಿಕೆಯ ಮೀರಾ ನಾಯಕ್ ಅವರು ಕೃತಿ ಲೋಕಾರ್ಪಣೆ ಮಾಡಿದರು. ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ, ಮಹಿಳಾ ಹೋರಾಟಗಾರ್ತಿಯರಾದ ಸಬೀಹಾ ಭೂಮಿಗೌಡ, ಪ್ರೊ.ಆರ್.ಇಂದಿರಾ, ಮೀನಾ ಮೈಸೂರು, ನಾ.ದಿವಾಕರ್ ಇತರರಿದ್ದರು.